ಕಾರವಾರ: ಮುಂದಿನ 12 ಗಂಟೆಗಳ ಕಾಲ ಕರಾವಳಿ ಭಾಗದಲ್ಲಿ ಭಾರೀ ಪ್ರಮಾಣದಲ್ಲಿ ಮಳೆಯಾಗಲಿದೆ ಎಂದು ಕರ್ನಾಟ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಮುನ್ಸೂಚನೆ ನೀಡಿದೆ.

ಸೆಪ್ಟೆಂಬರ್ 11 ರ ಬೆಳಗ್ಗೆ 8.30ರ ವರೆಗೆ ಕರಾವಳಿಯಲ್ಲಿ ಅತ್ಯಧಿಕ ಮಳೆ ದಾಖಲಾಗಲಿದೆ. ಕರಾವಳಿ ಜತೆ ಮಲೆನಾಡು ಜಿಲ್ಲೆಗಳಲ್ಲಿಯೂ ವ್ಯಾಪಕವಾಗಿ ಮಳೆ ಆಗಲಿದೆ. ಆ ಪೈಕಿ ಉಡುಪಿ ಜಿಲ್ಲೆಯ ಕಾಪು ಇನ್ನಜೇ ಎನ್ನುವ ಗ್ರಾಮದಲ್ಲಿ ಬರೋಬ್ಬರಿ 281.5 ಮಿ.ಮೀ. ಮಳೆ ಬೀಳಲಿದೆ ಎಂದು ಅಂದಾಜಿಸಲಾಗಿದೆ.

ಉಳಿದಂತೆ ಉತ್ತರ ಒಳನಾಡು ಜಿಲ್ಲೆಗಳಲ್ಲಿ ಚದುರಿದಂತೆ ವ್ಯಾಪಕವಾಗಿ ಸಾಧರಣ ಮಳೆ ಹಾಗೂ ಅಲ್ಲಲ್ಲಿ ಉತ್ತಮ ಮಳೆ ಆಗಲಿದೆ. ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಚದುರಿದಿಂದ ವ್ಯಾಪಕವಾಗಿ ಸಾಧರಣ ಮಳೆಯಾಗುವ ಸಾಧ್ಯತೆಯಿದೆ ಎಂದು ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ತಿಳಿಸಿದೆ.

ಸೂಚನೆಯಂತೆಯೇ ಕರಾವಳಿ ಜಿಲ್ಲೆಗಳಲ್ಲಿ ಮಳೆ ಜೋರಾಗಿದೆ. ಅರಬ್ಬಿ ಸಮುದ್ರದಲ್ಲಿಯೂ ಬಿರುಗಾಳು ಜೋರಾಗಿ ಬೀಸುತ್ತಿದೆ. ಲಿಂಗನಮಕ್ಕಿ, ಸೂಫಾ ಸೇರಿದಂತೆ ರಾಜ್ಯದ ಪ್ರಮುಖ ಜಲಾಶಯಗಳು ಈಗಾಗಲೇ ಭರ್ತಿಯಾಗುವ ಹಂತದಲ್ಲಿದೆ.

ಇಷ್ಟು ದೊಡ್ಡ ಪ್ರಮಾಣದಲ್ಲಿ ಮಳೆಯಾದರೆ ಜಲಾಶಯಗಳೂ ಬೇಗನೆ ಭರ್ತಿಯಾಗಲಿವೆ. ಇದೆಲ್ಲದರ ಬಗ್ಗೆ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ನಕ್ಷೆ ಸಮೇತ ಟ್ವೀಟ್ ಮಾಡಿದೆ.