ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಕರಾವಳಿ ತೀರದಲ್ಲಿ ನಾಳೆಯಿಂದ ಸಾಗರ ಕವಚ ಕಾರ್ಯಾಚಾರಣೆ ನಡೆಯಲಿದ್ದು, ಮೀನುಗಾರರಿಗೆ ಮಹತ್ವದ ಸೂಚನೆ ನೀಡಲಾಗಿದೆ.
ನಾಳೆಯಿಂದ ಅಂದರೆ, ಅ.7, 8 (ಬುಧವಾರ, ಗುರುವಾರ) ಎರಡು ದಿನ ಸಮುದ್ರದಲ್ಲಿ ಕರಾವಳಿ ಕಾವಲು ಪಡೆಯಿಂದ ಸಾಗರ ಕವಚ ಕಾರ್ಯಾಚರಣೆ ನಡೆಯಲಿದೆ. ಈ ವೇಳೆಯಲ್ಲಿ ಕಾವಲು ಪಡೆಯ ಸಿಬ್ಬಂದಿ ಮೀನುಗಾರಿಕೆಗೆ ತೆರಳುವ ಮತ್ತು ಮರಳುವ ಎಲ್ಲ ಬೋಟ್, ದೋಣಿಗಳನ್ನು ತಪಾಸಣೆ ಮಾಡಲಿದ್ದಾರೆ.
ಬುಧವಾರ ಬೆಳಗ್ಗೆ 5 ಗಂಟೆಯಿಂದ ಮುಂದಿನ 36 ತಾಸುಗಳ ಕಾಲ ಈ ಕಾರ್ಯಾಚರಣೆ ಜಾರಿಯಲ್ಲಿರಲಿದೆ. ಹಾಗಾಗಿ ಮೀನುಗಾರರಿಗೆ ಕರಾವಳಿ ಕಾವಲು ಪಡೆ ಮಹತ್ವದ ಸೂಚನೆಗಳನ್ನು ನೀಡಿದೆ. ಮೀನುಗಾರರು ಎಚ್ಚರದಿಂದ ಇರಲು ಏನೇನು ಮಾಡಬೇಕು ಎಂದು ಪ್ರಕಟಣೆ ಹೊರಡಿಸಿದೆ. ಅದರ ಹೈಲೈಟ್ ಇಲ್ಲಿದೆ.
ಮೀನುಗಾರಿಕೆ ತೆರಳುವ ಬೋಟ್, ದೋಣಿಯ ಪ್ರತಿಯೊಬ್ಬ ಮೀನುಗಾರರು ಗುರುತಿನ ಕಾರ್ಡುಗಳನ್ನು ಹೊಂದಿರಬೇಕು.
ಮೀನುಗಾರರ ಐಡಿ ಕಾರ್ಡ್, ಆಧಾರ ಕಾರ್ಡ್ ಯಾವುದಾದರು ಗುರುತಿನ ಕಾರ್ಡ್ ಕಡ್ಡಾಯವಾಗಿ ಇಟ್ಟುಕೊಂಡಿರಬೇಕು.
ಬೋಟ್, ದೋಣಿ ಮಾಲೀಕರು ಸಂಬಂಧಪಟ್ಟ ದಾಖಲೆಗಳನ್ನು ಇಟ್ಟುಕೊಂಡಿರಬೇಕು.
ಸಮುದ್ರದಲ್ಲಿ ಯಾರಾದರು ಬೋಟ್, ದೋಣಿ ಹತ್ತಿ ದಡಕ್ಕೆ ಸೇರಿಸಲು ಹೇಳಿದರೆ ಯಾರನ್ನೂ ಹತ್ತಿಸಿಕೊಳ್ಳಬಾರದು.
ಮೀನುಗಾರಿಕೆ ಇಲಾಖೆ, ಜಟ್ಟಿ, ಬಂದರು, ಲ್ಯಾಂಡಿಂಗ್ ಪಾಯಿಂಟ್ ಗಳಲ್ಲಿ ಮೀನುಗಾರಿಕೆ ತೆರಳುವ, ಮರಳುವ ಬೋಟ್, ದೋಣಿ ಮಾಹಿತಿಯನ್ನು ನಮೂದಿಸಿಕೊಳ್ಳಲಾಗುತ್ತದೆ.