ಕೊರೊನಾ ಭೀತಿ ನಡುವೆಯೇ ಈಗ ಬೆಳೆ ನಾಶಕ ಮರುಭೂಮಿ ಮಿಡತೆ ಕೀಟ ರೈತರನ್ನು ಚಿಂತೆಗೀಡು ಮಾಡಿದೆ. ಬಹುಭಕ್ಷ ಈ ಮಿಡತೆ ಹೊಲಕ್ಕೆ ನುಗ್ಗಿದರೆ ಬೆಳೆಗಳನ್ನು ಸಸಿ ಸಮೇತ ನಾಶ ಮಾಡಿ ಬಿಡುತ್ತದೆ. ಉತ್ತರ ಭಾರತದಲ್ಲಿನ ರಾಜಸ್ಥಾನ, ಮಧ್ಯಪ್ರದೇಶ ಹಾಗೂ ಉತ್ತರ ಪ್ರದೇಶದಲ್ಲಿ ಮಿಡತೆಯ ಹಾವಳಿ ಉಲ್ಬಣವಾಗಿದ್ದು, ಪೂರ್ವ ಮಹಾರಾಷ್ಟ್ರದ ಭಾಗದಲ್ಲಿಯೂ ಹರಡುತ್ತಿದೆ. ಪಂಜಾಬ್ ಹಾಗೂ ಗುಜರಾತ್ ರೈತರಿಗೂ ಕೂಡ ಮಿಡತೆಗಳ ಹಾವಳಿ ಬಗ್ಗೆ ಎಚ್ಚರಿಸಲಾಗಿದೆ.

ಈ ಮಿಡತೆಗಳು ಅಲೆ ಅಲೆಯಾಗಿ ಗುಂಪಿನಲ್ಲಿ ಒಂದು ದಿನದಲ್ಲಿ 150 ಕಿ.ಮೀ. ದೂರ ಗಾಳಿಯ ದಿಕ್ಕಿನಲ್ಲಿ ಹಾರಬಲ್ಲವು. ಒಂದು ಮಿಡತೆಯು ತನ್ನಷ್ಟೆ ತೂಕದ ಆಹಾರವನ್ನು ತಿನ್ನಬಲ್ಲವು. ಎಫ್.ಪಿ.ಓ. ವರದಿ ಪ್ರಕಾರ ಒಂದು ಚ.ಕಿ.ಮೀ. ವ್ಯಾಪ್ತಿಯಲ್ಲಿ ಹರಡಿಕೊಂಡ ಈ ಮಿಡತೆಗಳ ಸೈನ್ಯ (ಸುಮಾರು 40 ಮಿಲಿಯನ್) ಒಂದು ದಿನದಲ್ಲಿ 35,000 ಸಾವಿರ ಜನರು ತಿನ್ನುವಷ್ಟು ಅಹಾರವನ್ನು ತಿನ್ನಬಲ್ಲವು.

ಈ ಮಿಡತೆಗಳು ಬಹುಭಕ್ಷಕ ಕೀಟಗಳಾಗಿದ್ದು, ಯಾವುದೇ ಗಿಡದ ಅಥವಾ ಬೆಳೆಯ ಎಲೆಗಳು ಹೂ, ಹಣ್ಣು, ಬೀಜ, ಮರದ ತೊಗಟೆ ಹಾಗೂ ಬೆಳೆಯ ಕುಡಿಗಳನ್ನು ನಿರ್ದಾಕ್ಷಿಣ್ಯವಾಗಿ ಭಕ್ಷಿಸುತ್ತವೆ. ಪ್ರಪಂಚದಲ್ಲಿ ಮಿಡತೆಗಳಲ್ಲಿ 10 ಪ್ರಬೇದಗಳಿದ್ದು, ಭಾರತದಲ್ಲಿ ನಾಲ್ಕು ಪ್ರಭೇದಗಳಿವೆ.

ಹೆಣ್ಣು ಮಿಡತೆಯು ತೇವಾಂಶ ಹೊಂದಿರುವ ಮರಳು ಮಿಶ್ರಿತ ಮಣ್ಣಿನಲ್ಲಿ ತನ್ನ ಜೀವಾವಧಿಯಲ್ಲಿ ವಾರಕ್ಕೊಮ್ಮೆ 1000 ತತ್ತಿಗಳನ್ನು ಪ್ರತಿ ಚದುರ ಅಡಿಗೆ ಇಡುತ್ತದೆ. 3 ಸಲ ಈ ಆವೃತ್ತಿ ಇರುತ್ತದೆ. ಪ್ರಭುದ್ಧ ಮಿಡತೆಗಳು ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ 12-16 ಕಿ. ಮೀ. ವೇಗದಲ್ಲಿ ಹಾರುತ್ತವೆ.

ಓದಿ: ನುಗ್ಗೆ ಕೃಷಿ; ಬದುಕು ಖುಷಿ: ತಿಳಿಗಳ ಮಾಹಿತಿ

ಮಿಡತೆಗಳು ಕಡಿಮೆ ಸಂಖ್ಯೆಯಲ್ಲಿದ್ದಾಗ ಅಷ್ಟೇನು ಹಾನಿ ಮಾಡುವುದಿಲ್ಲ. ಆದರೆ ಅನೂಕೂಲಕರ ಹವಾಮಾನ ಸಂದರ್ಭದಲ್ಲಿ ಅಂದರೆ ಬೇಸಿಗೆ ನಡುವೆ ಸರಣಿ ಮಳೆಗಳು ಬಂದಾಗ ತೇವಾಂಶವುಳ್ಳ ಪರಿಸರ ಇವುಗಳಿಗೆ ಹುಟ್ಟಿಕೊಳ್ಳಲು ಪೂರಕ ಪರಿಸ್ಥಿತಿ ಎನಿಸುತ್ತದೆ.

ಪ್ರಸ್ತುತ ಬಂಗಾಳಕೊಲ್ಲಿ ಹಾಗೂ ಅರಬ್ಬಿ ಸಮುದ್ರದಲ್ಲಿ ಉಂಟಾಗಿರುವ ನಾನಾ ಬಗೆಯ ಚಂಡಮಾರುತಗಳು ಈ ಮಿಡತೆಗಳ ಹುಟ್ಟಿಗೆ ಪೂರಕವಾದ ವಾತಾವರಣ ಸೃಷ್ಟಿಸಿವೆ ಎನ್ನುವುದು ತಜ್ಞರ ಅಭಿಪ್ರಾಯ. ಈ ಸಂದರ್ಭದಲ್ಲಿ ಅಪರಿಮಿತ ಸಂಖ್ಯೆಯಲ್ಲಿ ಹುಟ್ಟಿಕೊಂಡು ತಾವು ಹುಟ್ಟಿಕೊಂಡ ಪ್ರದೇಶದಿಂದ ಕೋಟ್ಯಾಂತರ ಸಂಖ್ಯೆಯಲ್ಲಿ ಚಕ್ರವಾಗಿ ಹರಡುತ್ತಾ ಕೆಳಗಿಳಿದು ಹೊಲದಲ್ಲಿರುವ ಬೆಳೆಗಳನ್ನು ಕ್ಷಣಾರ್ಧದಲ್ಲಿ ತಿಂದು ದ್ವಂಸ ಮಾಡುತ್ತಾ ಅಲ್ಲಿಯೇ ಸಂತ್ತಾನೋತ್ಪತ್ತಿ ಮಾಡಿ ಮತ್ತಷ್ಟು ಸಂಖ್ಯೆಯಲ್ಲಿ ಬೆಳೆಯುತ್ತಾ ಹೋಗುತ್ತವೆ.

ಪಕ್ಕದ ಮಹಾರಾಷ್ಟ್ರ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ವಲಸೆಗಾರ ಬೆಳೆನಾಶಕ ಮರುಭೂಮಿ ಮಿಡತೆ ಕೀಟ (Desert Locust) ಗಳ ಹಾವಳಿ ಕಂಡುಬಂದಿದೆ. ಯಾವುದೇ ಸಂದರ್ಭದಲ್ಲಿ ಈ ಮಿಡತೆ ಕೀಟಗಳು ರಾಜ್ಯಕ್ಕೆ ಬರುವ ಸಂಭವ ಇದೆ.

ಓದಿ: ಖರ್ಚಿಲ್ಲದೆ ಹೊಲ ಅಭಿವೃದ್ದಿ ಮಾಡುವುದು ಹೇಗೆ?

ಪ್ರಸ್ತುತ ರಾಜ್ಯದ ಬೇಸಿಗೆ ಕಾಲದ ಬೆಳೆಗಳು, ಕಟಾವು ಹಂತದಲ್ಲಿರುವ ತೋಟಗಾರಿಕೆ ಹಾಗೂ ಅರಣ್ಯೀಕರಣದ ಗಿಡಮರಗಳು ಈ ಮಿಡತೆ ಕೀಟಗಳಿಂದ ಹಾನಿಗೊಳಗಾಗುವ ಸಾಧ್ಯತೆ ಇದೆ. ರೈತರು ಮುಂಜಾಗೃತೆ ಕ್ರಮಗಳನ್ನು ಕೈಗೊಂಡರೆ ಮಿಡತೆ ಕೀಟಗಳ ಹಾವಳಿಗಳಿಂದ ಬೆಳೆಗಳನ್ನು ರಕ್ಷಿಸಿಕೊಳ್ಳಬಹುದು.

ಮಿಡತೆ ನಿಯಂತ್ರಣ ಹೇಗೆ?

ತತ್ತಿಗಳನ್ನು ನಾಶಪಡಿಸುವುದು:
ಮಿಡತೆಗಳು ತತ್ತಿಗಳಿರಿಸಿದ ಜಾಗವನ್ನು ಗುರುತಿಸಿ ಅವುಗಳ ಸುತ್ತಲು ಕಂದಕ (2 ಅಡಿ ಅಗಲ ಮತ್ತು 2 ಅಡಿ ಆಳ) ನಿರ್ಮಿಸಿ ತತ್ತಿಯಿಂದ ಬರುವ ಮರಿಗಳನ್ನು ಆ ಕಂದಕಗಳಲ್ಲಿ ಬಿಡುವಂತೆ ಮಾಡುವುದು. ಅಲ್ಲದೆ ತತ್ತಿಗಳನ್ನು ನಾಶಪಡಿಸಲು ಮೇಲಿಂದ ಮೇಲೆ ಉಳುಮೆ ಮಾಡಬೇಕು.

ಓದಿ: ಹೊಲದಲ್ಲಿ ಮರ ಬೆಳೆಸಿ 40 ಸಾವಿರ ರೂ.ವರೆಗೆ ಪ್ರೋತ್ಸಾಹ ಪಡೆಯಿರಿ.

ಶಬ್ದ ಮಾಡುವುದು
ರೈತರು ಮಿಡತೆ ಕಾಣಿಸಿಕೊಂಡಾಗ ತಗಡಿನ ಡಬ್ಬಿ, ಡ್ರಮ್ಮು, ತಟ್ಟೆ ಇವುಗಳನ್ನು ಬಾರಿಸುವ ಮೂಲಕ ಭಾರಿ ಶಬ್ದವನ್ನು ಹುಟ್ಟಿಸಬೇಕು. ರೇಡಿಯೋ ಅಥವಾ ಎಲೆಕ್ಟ್ರಾನಿಕ್ ಸೌಂಡ್‍ಗಳನ್ನು ಹಚ್ಚಬೇಕು. ಇದರಿಂದ ಮಿಡತೆ ತಂಡಗಳು ಭೂಮಿಯ ಮೇಲಿನ ಬೆಳೆಗಳಿಗೆ ಬರುವುದಿಲ್ಲ.

ಔಷಧ ಸಿಂಪಡಣೆ
ಬೇವು ಆಧಾರಿತ ಸಿಂಪಡಣೆ ಮಾಡಬೇಕು. (0.15% ಇ.ಸಿ) 45 ಮಿ.ಲಿ. ಅನ್ನು 15 ಲೀ. ನೀರಿನಲ್ಲಿ ಬೆರೆಸಿ ಹಾಲಿ ಬೆಳೆಗಳಿಗೆ ಹಾಗೂ ಸುತ್ತಮುತ್ತ ಗಿಡಗಳಿಗೆ ಸಿಂಪಡಿಸಬೇಕು. ತೇವಾಂಶ ಹೊಂದಿದ ಮರಳು ಮಣ್ಣಿನಲ್ಲಿ ಮಿಡತೆಗಳು ತತ್ತಿ ಇಟ್ಟಿರುವ ಜಾಗಗಳನ್ನು ಗುರುತಿಸಿ, ರಾಸಾಯನಿಕಗಳನ್ನು ಸಿಂಪಡಿಸಿ ತತ್ತಿ ಹಂತದಲ್ಲಿ ನಾಶಪಡಿಸುವುದು.

ಬೆಳೆದು ನಿಂತ ಬೆಳೆಗೆ ಕ್ವಿನಾಲ್‍ಪಾಸ್ 1.5 % ಡಿ.ಪಿ. ಅಥವಾ ಕ್ಲೋರಿಪೈರಿಪಾಸ್ 1.5% ಡಿ.ಪಿ. ಅಥವಾ ಮಿಥೈಲ್ ಪ್ಯಾರಾಥೀಯಾನ್ 2% ಡಿ.ಪಿ. ಪುಡಿಯನ್ನು ಪ್ರತಿ ಹೇಕ್ಟೇರ್‍ಗೆ 25 ಕೆ.ಜಿ. ಯಂತೆ ಧೂಳಿಕರಿಸಬೇಕು.

ಓದಿ: ಕಿಸಾನ್ ಕಾರ್ಡ್ ಇದ್ದರೆ 3 ಲಕ್ಷ ರೂ.ವರೆಗೆ ಸಾಲ: ಕಾರ್ಡ್ ಪಡೆಯುವುದು ಹೇಗೆ?

ಸುರಕ್ಷತೆ ಇರಲಿ
ರೈತರು ಕಡ್ಡಾಯವಾಗಿ ಮೈ ತುಂಬಾ ಬಟ್ಟೆ ಧರಿಸಿ, ಮುಖಕ್ಕೆ ಮಾಸ್ಕ್, ಕೈ ಚೀಲಗಳು (ಹ್ಯಾಂಡ್ ಗ್ಲೌಸ್), ಟೋಪಿ ಹಾಗೂ ಕನ್ನಡಕ ಧರಿಸಿ ಬೆಳಗ್ಗೆ 7 ರಿಂದ 10 ಗಂಟೆಯೊಳಗಾಗಿ 500 ಮಿ.ಲಿ. ಡಿ.ಡಿ.ವಿ.ಪಿ. 76 % ಇ.ಸಿ. ಯನ್ನು 1500 ಲೀ. ನೀರಿಗೆ ಬೇರೆಸಿ ಅಥವಾ 100 ಕೆ.ಜಿ. ಮರಳು ಮಣ್ಣಿನ ಜೊತೆ ಬೆರೆಸಿ ಎರಚಬೇಕು. ಈ ಪುಡಿಯನ್ನು ಚೆಲ್ಲಿದ ನಂತರ ಕೂಡಲೇ ಹೊಲದಿಂದ ಹೊರಬರಬೇಕು. ಬಲಿಯುತ್ತಿರುವ ಮಿಡತೆಗಳು ಹೊಲದಲ್ಲಿ ಓಡಾಡುವಾಗ ಒಣಹುಲ್ಲು, ಕಸಕಡ್ಡಿಗಳಿಗೆ ಬೆಂಕಿ ಹಚ್ಚಿ ಸುಡಬೇಕು.

ಓದಿ: ರೋಗ ತಡೆಯಲು ಬೀಜೋಪಚಾರ ಎಂಬ ರಕ್ಷಾ ಕವಚ

ಮಿಡತೆ ಬಂದರೆ
ಸಾಗುವಳಿ ರಹಿತ ಜಮೀನಿನಲ್ಲಿ ಮಿಡತೆಗಳು ಗುಂಪು-ಗುಂಪಾಗಿ ಹರಡಿದಾಗ ಕ್ವಿನಾಲ್‍ಪಾಸ್ 1.5 % ಡಿ.ಪಿ. ಅಥವಾ ಕ್ಲೋರಿಪೈರಿಪಾಸ್ 1.5% ಡಿ.ಪಿ, ಅಥವಾ ಮಿಥೈಲ್ ಪ್ಯಾರಾಥೀಯಾನ್ 2% ಡಿ.ಪಿ. ಪುಡಿಯನ್ನು ಪ್ರತಿ ಹೇಕ್ಟೇರ್‍ಗೆ 25 ಕೆ.ಜಿ. ಯಂತೆ ಧೂಳಿಕರಿಸಬೇಕು ಅಥವಾ ಮೆಲಾಥಿಯಾ 96% ಯು.ಎಲ್.ವಿ. @ 1 ಲೀ. ಪ್ರತಿ ಹೇಕ್ಟರ್‍ಗೆ ಯು.ಎಲ್.ವಿ. ಸಿಂಪರಣೆ ಯಂತ್ರದ ಮೂಲಕ ನೇರವಾಗಿ ಮಿಡತೆಗಳ ಮೇಲೆ ಸಿಂಪಡಿಸಬೇಕು ಎಂದು ಕಲಬುರಗಿ ಜಂಟಿ ಕೃಷಿ ನಿರ್ದೇಶಕ ರಿತೇಂದ್ರನಾಥ ಸುಗೂರ ಅವರು ಸಲಹೆ ನೀಡಿದ್ದಾರೆ.