ಹವಾಮಾನ ವೈಪರಿತ್ಯ ಮತ್ತು ಬೆಳೆ ಹಾನಿಗಳಿಂದಾಗಿ ಮುಕ್ತಿ ಪಡೆಯಲು ಭಾರತೀಯ ಹವಾಮಾನ ಇಲಾಖೆ ಹಾಗೂ ಭಾರತೀಯ ಕೃಷಿ ಅನುಸಂಧಾನ ಪರಿಷತ್ ಸಹಭಾಗಿತ್ವದಲ್ಲಿ ಮೇಘದೂತ್ ಎಂಬ ಮೊಬೈಲ್ ಅಪ್ಲಿಕೇಷನ್ ಅನ್ನು ಬಿಡುಗಡೆ ಮಾಡಲಾಗಿದೆ.

ಇದು ಕೇವಲ ಕೃಷಿಗೆ ಮೀಸಲಿಡದೆ ತೋಟಗಾರಿಕೆ, ಮೀನುಸಾಕಾಣಿಕೆ, ಕೋಳಿಸಾಕಾಣಿಕೆ, ಹೈನುಗಾರಿಕೆ, ಕುರಿಸಾಕಾಣಿಕೆ ಮತ್ತು ಇನ್ನಿತರ  ಕೃಷಿ ಸಲಹೆಗಳನ್ನು (ಮಣ್ಣು ಪರೀಕ್ಷೆ, ಕೃಷಿ ಹೊಂಡ, ಮಳೆನೀರು ಕೊಯ್ಲು ಇತ್ಯಾದಿ) ನೀಡಲು ಬಳಸಲಾಗುತ್ತಿದೆ. ಆದ್ದರಿಂದ  ರೈತರು ಈ ಆಪ್‌ನ್ನು ಬಳಸಿಕೊಂಡು ಕೃಷಿ ಮಾಡಿದ್ದಲ್ಲಿ ತಮಗಾಗುವ ನಷ್ಟವನ್ನು ತಗ್ಗಿಸಿ ಲಾಭ ಪಡೆಯಬಹುದಾಗಿದೆ.

ಈ ಅಪ್ಲಿಕೇಷನ್ ಮೊದಲ ಹಂತದಲ್ಲಿ ದೇಶದ 150 ವಿವಿಧ ಜಿಲ್ಲೆಗಳ ಹವಾಮಾನ  ಮುನ್ಸೂಚನೆ ಮತ್ತು ಬೆಳೆ ಸಲಹೆಗಳ ಕುರಿತು ಕಾರ್ಯನಿರ್ವಹಿಸಲಿದೆ. ರೈತಾಪಿ ವರ್ಗ ಇದರ ಸದುಪಯೊಗ ಪಡೆದುಕೊಳ್ಳಬೇಕು ಎನ್ನುವುದು ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥರಾದ ಡಾ. ಭರತ್ ಕುಮಾರ್ ಟಿ. ಪಿ. ಅವರ ಸಲಹೆ.

ಅತಿವೃಷ್ಠಿ ಮತ್ತು ಅನಾವೃಷ್ಠಿಯಂತ ವಿಕೋಪಗಳು ಮೇಲಿಂದ ಮೇಲೆ ಸಂಭವಿಸುತ್ತಿದ್ದು,  ಇಂತಹ ಸಮಸ್ಯೆಗಳಿಂದ ರೈತರು ದೂರವಾಗಲು ಹವಾಮಾನ ಆಧಾರಿತ ಕೃಷಿಯನ್ನು ಆದಷ್ಟು ಬೇಗನೆ ಅಳವಡಿಸಿಕೊಳ್ಳುವುದು ಉತ್ತಮ. ರೈತರ ಸಲುವಾಗಿ ಭಾರತ ಹವಾಮಾನ ಇಲಾಖೆ ಮತ್ತು ಭಾರತೀಯ ಕೃಷಿ ಅನುಸಂಧಾನ ಪರಿಷತ್ ಜಂಟಿಯಾಗಿ ಮೇಘದೂತ್ ಮೊಬ್ಯೆಲ್ ಅಪ್ಲಿಕೇಷನ್ ಬಿಡುಗಡೆಗೊಳಿಸಿದೆ.

ಆ್ಯಪ್ ಎಲ್ಲಿ ಸಿಗುತ್ತದೆ?
ರೈತರು ತಮ್ಮ ಸ್ಮಾರ್ಟ್ ಪೋನ್‌ನ ಪ್ಲೇಸ್ಟೋರ್‌ನಲ್ಲಿ ಡೌನ್‌ಲೋಡ್ ಮಾಡಿಕೊಂಡು ಅದರಲ್ಲಿ ರೈತನ ಹೆಸರು, ದೂರವಾಣಿ ಸಂಖ್ಯೆ, ರಾಜ್ಯ ಮತ್ತು ಜಿಲ್ಲೆಯನ್ನು ನೋಂದಾಯಿಸಬೇಕು. ನಂತರ ನೊಂದಾಯಿತ ಬಳಕೆದಾರರು ತಮ್ಮ ಜಿಲ್ಲೆಯ ಹವಾಮಾನ ಮುನ್ಸೂಚನೆ ಹಾಗೂ ಕೃಷಿ ಆಧಾರಿತ ಮಾಹಿತಿಯನ್ನು ಪಡೆಯಬಹುದು.

ಆ್ಯಪ್ ನಲ್ಲಿ ಹಿಂದಿನ ದಿನಗಳ ಆಯಾ ಜಿಲ್ಲೆಗಳ ಹವಾಮಾನ ಮಾಹಿತಿ ಮತ್ತು ಮುಂದಿನ ಐದು ದಿನಗಳ ಹವಾಮಾನ ಮುನ್ಸೂಚನೆ (ವಾರಕ್ಕೆ ಎರಡು ಬಾರಿ ಪ್ರತಿ ಮಂಗಳವಾರ ಮತ್ತು ಶುಕ್ರವಾರ) ಮಾಹಿತಿ ಪಡೆಯಬಹುದು.