ಲಾರಿ ಡಿಕ್ಕಿ ಹೊಡೆದು ಕಾಡಾನೆ ಮೃತಪಟ್ಟಿದ್ದು, ಈ ಘಟನೆ ಬಂಡಿಪುರ ಅಭಯಾರಣ್ಯದ ಮೂಲಕ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 766ರಲ್ಲಿ ಮಂಗಳವಾರ ರಾತ್ರಿ ನಡೆದಿದೆ.

ಅಭಯಾರಣ್ಯದಲ್ಲಿ ರಾತ್ರಿ 9ರಿಂದ ಬೆಳಿಗ್ಗೆ 6ರ ವರೆಗೆ ವಾಹನ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ.

ಆದರೆ ಈ ನಿಯಮ ಮೀರಿ ನಿನ್ನೆ ರಾತ್ರಿ 9.15ರ ಸುಮಾರಿನಲ್ಲಿ ಕೇರಳದಿಂದ ಕರ್ನಾಟಕದತ್ತ ಬಂದ ಸರಕು ಸಾಗಣೆ ಲಾರಿ ಮದ್ದೂರು ವಲಯ ವ್ಯಾಪ್ತಿಯಲ್ಲಿ ರಸ್ತೆ ದಾಟುತ್ತಿದ್ದ 12 ವರ್ಷದ ಹೆಣ್ಣಾನೆಗೆ ಡಿಕ್ಕಿ ಹೊಡೆದಿದ್ದು, ಸ್ಥಳದಲ್ಲೇ ಆನೆ ಮೃತಪಟ್ಟಿದೆ.

ಈ ಪ್ರಕರಣ ಸಂಬಂಧ ಲಾರಿ ಸಮೇತ ಚಾಲಕ ಮತ್ತು ಸಹಾಯಕನನ್ನು ಬಂಧಿಸಲಾಗಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.