
ಉದ್ದು, ಹೆಸರು, ಅಲಸಂದೆ ಹಳದಿ ರೋಗ ಹತೋಟಿಗೆ ಸರಳ ಕ್ರಮ

ಪೂರ್ವ ಮುಂಗಾರಿನಲ್ಲಿ ಬಿದ್ದ ಮಳೆಗೆ ರೈತರು ಉದ್ದು, ಹೆಸರು ಹಾಗೂ ಅಲಸಂದೆ ಬೆಳೆಗಳನ್ನು ಬಿತ್ತಿದ್ದಾರೆ. ಈ ಬೆಳೆಗಳಲ್ಲಿ ಹೆಚ್ಚಾಗಿ ಹಳದಿ ಮಚ್ಚೆರೋಗ (Yellow mosaic virus) ಕಾಣಿಸಿಕೊಳ್ಳುತ್ತವೆ. ಸದ್ಯ ಮೈಸೂರು ತಾಲೂಕು ಪ್ರದೇಶದಲ್ಲಿ ಈ ಬೆಳೆಗಳು ಸಂಪೂರ್ಣ ಹಳದಿ ಬಣ್ಣಕ್ಕೆ ತಿರುಗಿ ಕಾಳುಗಳ ಉತ್ಪತ್ತಿ ಹಾಗೂ ಗುಣಮಟ್ಟದ ಮೇಲೆ ದುಷ್ಪರಿಣಾಮವನ್ನುಂಟು ಮಾಡುತ್ತಿದೆ.
ಹೆಸರು ಮತ್ತು ಉದ್ದು ಬೆಳೆಯಲ್ಲಿ ಹಳದಿ ಮಚ್ಚೆರೋಗ: ಈ ಹಸಿರು ಮಿಶ್ರಿತ ಹಳದಿ ರೋಗವು ಮೊದಮೊದಲು ಒಂದು ಅಥವಾ ಎರಡು ಗಿಡಗಳಿಗೆ ಕಾಣಿಸಿಕೊಂಡು ನಂತರ ಬಿಳಿನೊಣಗಳ ಮೂಲಕ ಅತಿ ಹೆಚ್ಚು ವೇಗವಾಗಿ ಪ್ರಸಾರವಾಗುತ್ತಿದೆ.
ಅಲಸಂದೆ ಹಳದಿ ರೋಗ: ಈ ರೋಗವು ಅಲಸಂದೆ ತಾಕುಗಳಲ್ಲಿ ಹೆಚ್ಚು ಕಂಡುಬಂದಿದ್ದು ಎಫಿಡ್ ಎಂಬ ಹೇನಿನ ಮೂಲಕ ಹರಡುತ್ತಿದೆ. ವಾತಾವರಣದಲ್ಲಿ ಹೆಚ್ಚು ಉಷ್ಣಾಂಶ ಹಾಗೂ ತೇವಾಂಶಗಳಿದೆ. ಹಾಗಾಗಿ ಈ ಕೀಟವು ತ್ವರಿತಗತಿಯಲ್ಲಿ ಸಂತಾನಾಭಿವೃದ್ಧಿ ಮಾಡಿ ಮರಿ ಹಾಗೂ ರೆಕ್ಕೆಬಂದಂಥ ಹೇನುಗಳ ಮೂಲಕ ಹಾರಿ ಒಂದು ಗಿಡದಿಂದ ಮತ್ತೊಂದು ಗಿಡಕ್ಕೆ ರಸ ಹೀರುವ ಮೂಲಕ ರೋಗವನ್ನು ಪ್ರಸಾರಮಾಡುತ್ತದೆ.
ಓದಿ: ಹೊಲದಲ್ಲಿ ಮರ ಬೆಳೆಸಿ 40 ಸಾವಿರ ರೂ.ವರೆಗೆ ಪ್ರೋತ್ಸಾಹ ಪಡೆಯಿರಿ.

ಉದ್ದು, ಹೆಸರು ಹಾಗೂ ಅಲಸಂದೆ ಬೆಳೆಗಳಿಗೆ ಹಳದಿ ಮಚ್ಚೆರೋಗ ಬಂದಿದ್ದಲ್ಲಿ ರೈತರು ಕೀಟನಾಶಕಗಳಾದ ರೋಗರ್ 1.75 ಮಿ.ಲೀ. ಒಂದು ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು. ಅಥವಾ ಇಮಿಡಾಕ್ಲೋಪ್ರಿಡ್ 0.50 ಮಿ.ಲೀ. ಒಂದು ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು.
ಓದಿ: ಕಿಸಾನ್ ಕಾರ್ಡ್ ಇದ್ದರೆ 3 ಲಕ್ಷ ರೂ.ವರೆಗೆ ಸಾಲ: ಕಾರ್ಡ್ ಪಡೆಯುವುದು ಹೇಗೆ?
ಸಿಂಪಡಣೆ ಆದ ನಂತರ ರೋಗಗ್ರಸ್ತ ಗದ್ದೆ ಅಥವಾ ಹೊಲಗಳಲ್ಲಿರುವ ಹಳದಿ ಮಿಶ್ರಿತ ಗಿಡಗಳನ್ನು ಕಿತ್ತು ನಾಶಪಡಿಸಬೇಕು. ಹೆಚ್ಚಿನ ಮಾಹಿತಿಗಾಗಿ ಹೋಬಳಿ ಮಟ್ಟದ ರೈತ ಸಂಪರ್ಕ ಕೇಂದ್ರವನ್ನು ಸಂಪರ್ಕಿಸಬೇಕು ಎಂದು ಕೃಷಿ ಇಲಾಖೆ ಮಾಹಿತಿ ನೀಡಿದೆ.
ಓದಿ: ಆಡು ಸಾಕಾಣಿಕೆಗೆ ತಳಿಗಳ ಜ್ಞಾನ
ಉದ್ದು, ಹೆಸರು, ಅಲಸಂದೆ ಬೆಳೆಗಳಿಗೆ ಭವಿಷ್ಯದಲ್ಲಿ ಉತ್ತಮ ಬೆಳೆ ಸಿಗುವ ನಿರೀಕ್ಷೆ ಇದೆ. ಹಾಗಾಗಿ ಸಾಧ್ಯವಾದಷ್ಟು ಬೆಳೆಗಳನ್ನು ಉತ್ತಮವಾಗಿ ಕಾಪಾಡಿಕೊಂಡಲ್ಲಿ ರೈತರು ಈ ಬೆಳೆಗಳಿಗೆ ಉತ್ತಮ ದರ ನಿರೀಕ್ಷಿಸಬಹುದು.