ಮಳೆಗಾಲದಲ್ಲಿ ತೋಟಗಾರಿಕಾ ಬೆಳೆಗಳಾದ ಕಾಫಿ, ಕಾಳುಮೆಣಸು, ಅಡಿಕೆ ಮತ್ತು ಶುಂಠಿ ಮುಂತಾದ ಬೆಳೆಗಳಿಗೆ ತಗಲುವ ಶಿಲೀಂದ್ರ ರೋಗಗಳನ್ನು ಮುಂಜಾಗ್ರತೆಯಾಗಿ ತಡೆಗಟ್ಟಲು ಬೋರ್ಡೋ ದ್ರಾವಣ ಅಪಾಯಕಾರಿಯಲ್ಲದ ಬಹಳ ಉಪಯುಕ್ತ ಶಿಲೀಂದ್ರ ನಾಶಕ.

ಕಾಫಿ ಬೆಳೆಗೆ ತಗಲುವ ಕೊಳೆ ರೋಗ, ತುಕ್ಕು ರೋಗ; ಅಡಿಕೆ: ಕೊಳೆರೋಗ, ಸುಳಿಕೊಳೆರೋಗ, ತೆಂಗು: ಸುಳಿ ಕೊಳೆರೋಗ, ಕಾಂಡದಿಂದ ರಸಸೋರುವ ರೋಗ, ಕಾಳು ಮೆಣಸು: ಶೀಘ್ರ ಸೊರಗು ರೋಗ,ಚಿಬ್ಬು ರೋಗ (ಕೊತ್ತು ಉದುರುವುದು), ಶುಂಠಿ: ಗೆಡ್ಡೆ ಕೊಳೆರೋಗ, ಎಲೆಚುಕ್ಕೆರೋಗ ಬಾಧೆಗೆ ಇದು ಉತ್ತಮ ಔಷಧ.

ಆದರೆ ಇದನ್ನು ವೈಜ್ಞಾನಿಕವಾಗಿ ತಯಾರಿಸುವ ವಿಧಾನದಲ್ಲಿ ತಪ್ಪುಗಳಾದರೆ ರಸಸಾರದಲ್ಲಾಗುವ ವ್ಯತ್ಯಾಸದಿಂದ ಸಸ್ಯ ರೋಗಗಳು ಸಮರ್ಪಕವಾಗಿ ನಿರ್ವಹಣೆಯಾಗುವುದಿಲ್ಲ. ಅಲ್ಲದೆ ತಟಸ್ಥ ರಸಸಾರವಿಲ್ಲದ ದ್ರಾವಣವನ್ನು ಬೆಳೆಗಳ ಮೇಲೆ ಸಿಂಪಡಣೆ ಮಾಡಿದಲ್ಲಿ ಎಲೆಗಳು ಸುಟ್ಟು ದುಷ್ಪರಿಣಾಮವಾಗುವುದು. ಹಾಗಾಗಿ ವೈಜ್ಞಾನಿಕ ಪದ್ಧತಿಯಲ್ಲಿ ಬೋರ್ಡೊ ದ್ರಾವಣ ತಯಾರಿಸುವುದು ಅಗತ್ಯ.

ಕೆಲ ಪ್ರದೇಶಗಳಲ್ಲಿ ಕೃಷಿಕರು ಮೈಲುತುತ್ತು, ಸುಣ್ಣ ಮತ್ತು ನೀರನ್ನು ಲೆಕ್ಕಚಾರದಲ್ಲಿ ಬೆರಸದೆ, ದ್ರಾವಣದ ರಸಸಾರವನ್ನು (ಪಿ.ಹೆಚ್) ಪರೀಕ್ಷಿಸದೆ ಸಿಂಪರಣೆ ಮಾಡುತ್ತಾರೆ. ಅದರಿಂದ ರೋಗದ ಹತೋಟಿಗೆ ಬಾರದೆ ಆರ್ಥಿಕ ನಷ್ಟ ಅನುಭವಿಸುತ್ತಿರುವುದು ಸಾಮಾನ್ಯ ಸಂಗತಿಯಾಗಿದೆ.  

ಮೈಲುತುತ್ತು ಅಂದರೆ ಶುದ್ಧ ತಾಮ್ರವನ್ನು ಗಂಧಕಾಮ್ಲದಲ್ಲಿ ಉಪಚರಿಸಿ ಅದನ್ನು ಹರಳು ರೂಪಕ್ಕೆ ತರಲಾದ ಉತ್ಪನ್ನ. ತಾಮ್ರವು ಶಿಲೀಂದ್ರಗಳಿಗೆ ವಿರುದ್ದವಾಗಿ ಕೆಲಸ ಮಾಡುತ್ತದೆ. ಘನ ಲೋಹವಾಗಿ ಕರಗದೆ ಇರುವ ಕಾರಣ ಅದನ್ನು ನೇರವಾಗಿ ಬಳಕೆ ಮಾಡಲು ಬರುವುದಿಲ್ಲ. ಅದನ್ನು ಸಲ್ಫೇಟ್ ರೂಪಕ್ಕೆ ತಂದು, ಅದರ ಆಮ್ಲೀಯ ಗುಣವನ್ನು ತಗ್ಗಿಸಲು ಅದರೂಂದಿಗೆ ಸುಣ್ಣವನ್ನು ಸೇರಿಸಿ, ನೀರಿನೂಂದಿಗೆ ಮಿಶ್ರಣ ಮಾಡಿ ಸಿಂಪಡಣೆ ಮಾಡಲಾಗುತ್ತದೆ.

ಸಸ್ಯದ ಹಸಿರು ಅಂಗಗಳು ಅದನ್ನು ವೇಗವಾಗಿ ಸ್ವೀಕರಿಸುತ್ತವೆ. ಆಮ್ಲೀಯಾವಾದ ಅಥವಾ ಹೆಚ್ಚು ಕ್ಷಾರೀಯವಾದ ದ್ರಾವಣವನ್ನು ಸಿಂಪಡಿಸಿದಾಗ ಹೀರಿಕೊಳ್ಳುವ ಗುಣ ನಿಧಾನವಾಗುತ್ತದೆ. ಇದರಿಂದ ರೋಗಗಳು ಸಮರ್ಪಕವಾಗಿ ಹತೋಟಿಗೆ ಬರುವುದಿಲ್ಲ. ಬೋರ್ಡೋ ದ್ರಾವಣದಲ್ಲಿರುವ ತಾಮ್ರ ಮತ್ತು ಸುಣ್ಣದ ಅಂಶಗಳು ಸಸ್ಯ ಬೆಳವಣಿಗೆಗೆ ಅಗತ್ಯವಾದ ಪೋಷಕಾಂಶಗಳಾಗಿರುವ ಕಾರಣ ಅದನ್ನು ಹೀರಿಕೊಳ್ಳುತ್ತವೆ. ಜತೆಗೆ ಎಲೆ, ಕಾಯಿಗಳ ಮೇಲೆ ಲೇಪಿತವಾಗಿ, ಹೀರಿಕೊಳ್ಳುವುದರಿಂದ ಶಿಲೀಂದ್ರದ ಸೋಂಕು ತಡೆಯಲ್ಪಡುತ್ತದೆ. ಮೇಲ್ಭಾಗದಲ್ಲಿ ಲೇಪಿತವಾದಗಲೂ ಶಿಲೀಂದ್ರದ ಪ್ರವೇಶಕ್ಕೆ ತಡೆಯಾಗುತ್ತದೆ.

ಬೋರ್ಡೊ ದ್ರಾವಣದ ಅನುಕೂಲಗಳು:
ಈ ದ್ರಾವಣದಿಂದ ತೋಟದ ಬೆಳೆಗಳಲ್ಲಿ ಕಂಡುಬರುವ ಅನೇಕ ಶಿಲೀಂದ್ರ ರೋಗಗಳನ್ನು ಹತೋಟಿ ಮಾಡಬಹುದು. ಈ ದ್ರಾವಣವನ್ನು ಸಿಂಪರಣೆ ಮಾಡಿದಾಗ ಸ್ವಾಭಾವಿಕವಾಗಿ ಬೆಳೆಯ ಹೊರ ಮೈಯಲ್ಲಿ ಅಂಟಿಕೊಳ್ಳುವುದರಿಂದ ಸುಮಾರು 30 ರಿಂದ 45 ದಿನಗಳವರೆಗೆ ಬೆಳೆಗೆ ರಕ್ಷಣೆ ನೀಡಬಲ್ಲದು.

ಕಡಿಮೆ ಖರ್ಚಿನಿಂದ ಹೆಚ್ಚು ಪರಿಣಾಮಕಾರಿಯಾದ ಶಿಲೀಂದ್ರನಾಶಕ ದ್ರಾವಣ ತಯಾರಿಸಿ ಬಳಸಬಹುದು. ಇತರ ಶಿಲೀಂದ್ರನಾಶಕಗಳಿಗೆ ಹೋಲಿಸಿದರೆ ಮನುಷ್ಯರ ಮೇಲೆ ಇದರ ದುಷ್ಪರಿಣಾಮ ಕಡಿಮೆ.

ಶೇ. 1 ರ ಬೋರ್ಡೊ ದ್ರಾವಣ ತಯಾರಿಸಲು ಬೇಕಾದ ವಸ್ತುಗಳು:
ಮೈಲುತುತ್ತ 1 ಕೆ.ಜಿ., ಸುಣ್ಣ 1 ಕೆ.ಜಿ., ನೀರು 100 ಲೀಟರ್, ಸ್ವಚ್ಛವಾದ ಕಬ್ಬಿಣದ ತುಂಡು (ಚಾಕು ಅಥವಾ ಪಿ.ಹೆಚ್.ಪೇಪರ್), 10 ಲೀ. ಸಾಮರ್ಥ್ಯದ 2 ಪ್ಲಾಸ್ಟಿಕ್ ಬಕೆಟ್, 100 ಲೀ. ಸಾಮರ್ಥ್ಯದ 1 ಪ್ಲಾಸ್ಟಿಕ್ ಡ್ರಮ್ ಅಥವಾ ಬ್ಯಾರಲ್

ತಯಾರಿಕೆ ವಿಧಾನ:
ಒಂದು ಕೆ.ಜಿ. ಮೈಲುತುತ್ತವನ್ನು 10 ಲೀಟರ್ ನೀರಿರುವ ಪ್ಲಾಸ್ಟಿಕ್ ಬಕೆಟಿನಲ್ಲಿ ಸಂಪೂರ್ಣವಾಗಿ ಕರಗಿಸಬೇಕು. ಇನ್ನೊಂದು 10 ಲೀಟರ್ ನೀರಿರುವ ಪ್ಲಾಸ್ಟಿಕ್ ಬಕೆಟ್‍ನಲ್ಲಿ 1 ಕೆ.ಜಿ. ಸುಣ್ಣವನ್ನು ಸಂಪೂರ್ಣವಾಗಿ ಕರಗಿಸಬೇಕು. ಕರಗಿದ 10 ಲೀಟರ್ ಸುಣ್ಣದ ದ್ರಾವಣದಲ್ಲಿ ಸ್ವಲ್ಪ ಪ್ರಮಾಣದ ಸುಣ್ಣದ ದ್ರಾವಣವನ್ನು 80 ಲೀ. ನೀರಿರುವ 1 ಪ್ಲಾಸ್ಟಿಕ್ ಡ್ರಮ್‍ಗೆ ಸುರಿಯಬೇಕು.

ನಂತರ 10 ಲೀಟರ್ ಮೈಲುತುತ್ತದ ದ್ರಾವಣವನ್ನು ನಿಧಾನವಾಗಿ ಸುರಿದು ಚೆನ್ನಾಗಿ ಕಲಸಬೇಕು. ನಂತರ ರಸಸಾರವನ್ನು ಪರೀಕ್ಷೆ ಮಾಡುತ್ತ ಸ್ವಲ್ಪ ಸ್ವಲ್ಪ ಉಳಿದ ಸುಣ್ಣದ ದ್ರಾವಣವನ್ನು ಸುರಿಯಬೇಕಾಗುತ್ತದೆ. ಸರಿಯಾದ ಶೇ.1 ರ ಬೋರ್ಡೊ ದ್ರಾವಣದ ಮಿಶ್ರಣವು ತಿಳಿ ನೀಲಿ ಬಣ್ಣದಾಗಿರುತ್ತದೆ.

ಬೋರ್ಡೊ ದ್ರಾವಣದ ಪರೀಕ್ಷೆ:
ತಯಾರು ಮಾಡಿದ ಮಿಶ್ರಣವು ಸರಿಯಾಗಿದೆಯೊ ಅಥವಾ ಇಲ್ಲವೋ ಎಂಬುದನ್ನು ಪರೀಕ್ಷಿಸಲು ಒಂದು ಸ್ವಚ್ಛವಾದ ಚಾಕು ಅಥವಾ ಬ್ಲೇಡನ್ನು ಒಂದು ನಿಮಿಷ ಬೋರ್ಡೊ ದ್ರಾವಣದಲ್ಲಿ ಅದ್ದಿ ತೆಗೆಯಬೇಕು. ಒಂದು ವೇಳೆ ಚಾಕು ಅಥವಾ ಬ್ಲೇಡಿನ ಮೇಲೆ ಕಂದು ಅಥವಾ ಕೆಂಪು ಬಣ್ಣ ಕಂಡು ಬಂದರೆ, ತಯಾರಿಸಿದ ದ್ರಾವಣವು ಆಮ್ಲಯುಕ್ತವಾಗಿದ್ದು ಅದನ್ನು ಸಿಂಪಡಣೆ ಮಾಡಿದ್ದಲ್ಲಿ ಬೆಳೆಗಳಿಗೆ ಹಾನಿಕಾರಕ.

ಆ ದ್ರಾವಣವನ್ನು ತಟಸ್ಥ ರಸಸಾರಕ್ಕೆ ತರಲು ಇನ್ನೂ ಸ್ವಲ್ಪ ಸುಣ್ಣದ ತಿಳಿ ನೀರನ್ನು ಹಾಕಬೇಕು. ನಂತರ ಮತ್ತೆ ಪರೀಕ್ಷಿಸಿ ನೋಡಿದಾಗ ಚಾಕು ಅಥವಾ ಬ್ಲೇಡಿನ ಮೇಲೆ ಕಂದು/ಕೆಂಪು ಬಣ್ಣ ಇಲ್ಲದೆ ಹೊಳೆಯುತ್ತಿದ್ದರೆ ಈ ದ್ರಾವಣವು ಸರಿಯಾಗಿದೆ ಎಂದು ತಿಳಿಯಬಹುದು. ಕಿತ್ತಳೆ ಬಣ್ಣದ ಲಿಟ್ಮಸ್ ಕಾಗದವನ್ನು ಬೋರ್ಡೊ ದ್ರಾವಣದಲ್ಲಿ ಅದ್ದಿ ತೆಗೆದಾಗ ಕಿತ್ತಳೆ ಬಣ್ಣದ ಲಿಟ್‍ಮಸ್ ಕಾಗದವು ತಿಳಿನೀಲಿ ಬಣ್ಣಕ್ಕೆ ತಿರುಗಿದರೆ ಬೋರ್ಡೊ ದ್ರಾವಣ ಸರಿಯಾಗಿದೆ ಎಂದು ತಿಳಿಯುವುದು.

ಗಮನದಲ್ಲಿಡಬೇಕಾದ ಪ್ರಮುಖ ಅಂಶಗಳು:
ಬೋರ್ಡೊ ದ್ರಾವಣ ತಯಾರಿಸಲು ಯಾವಾಗಲೂ ಮಣ್ಣಿನ ಅಥವಾ ಕಟ್ಟಿಗೆ ಅಥವಾ ಪ್ಲಾಸ್ಟಿಕ್ ಪಾತ್ರೆಗಳನ್ನು ಮಾತ್ರ ಉಪಯೋಗಿಸಬೇಕು. ಬೋರ್ಡೊ ದ್ರಾವಣವನ್ನು ಬಹಳ ಹೊತ್ತು ಇಟ್ಟಾಗ ತನ್ನ ಪರಿಣಾಮಕಾರಿಯನ್ನು ಕಳೆದುಕೊಳ್ಳುವುದರಿಂದ ದ್ರಾವಣವನ್ನು ತಯಾರಿಸಿದ ಕೂಡಲೇ ಉಪಯೋಗಿಸಬೇಕು. ಒಂದು ವೇಳೆ ಒಂದು ದಿನ ಇಟ್ಟು ಉಪಯೋಗಿಸುವುದಿದ್ದಲ್ಲಿ 250 ಗ್ರಾಂ ಬೆಲ್ಲವನ್ನು 100 ಲೀಟರ್ ದ್ರಾವಣಕ್ಕೆ ಬೆರೆಸಿ ಇಟ್ಟುಕೊಳ್ಳಬಹುದು.

ಬೋರ್ಡೊ ದ್ರಾವಣಕ್ಕೆ ಯಾವುದೇ ಪೀಡೆನಾಶಕಗಳನ್ನು ಮಿಶ್ರಣ ಮಾಡಿ ಸಿಂಪರಣೆ ಮಾಡಬಾರದು.  ಬೋರ್ಡೊ ದ್ರಾವಣವನ್ನು ಬಟ್ಟೆಯಲ್ಲಿ ಅಥವಾ ಸಣ್ಣ ಕಣ್ಣಿನ ಜರಡಿಯಲ್ಲಿ ಶೋಧಿಸಿ ಉಪಯೋಗಿಸಬೇಕು. ಹೆಚ್ಚು ಸುಣ್ಣ ಸೇರಿಸಿದರೆ ದ್ರಾವಣ ಕ್ಷಾರೀಯ ಗುಣ ಹೊಂದಿ ರಸಸಾರ 7 ಕ್ಕಿಂತ ಹೆಚ್ಚಾಗುವುದು ಹಾಗು ತಾಮ್ರದ ಮುಕ್ತ ವಿದ್ಯುದ್ವಾಹಿ ಕಣಗಳು ಕಡಿಮೆಯಾಗಿ ಶಿಲೀಂದ್ರನಾಶಕದ ಗುಣ ಕಡಿಮೆಯಾಗುತ್ತದೆ. ಬೋರ್ಡೊ ದ್ರಾವಣಕ್ಕೆ ಆಮ್ಲೀಯತೆ ಇರಬಾರದು. ಶುದ್ಧ ಸುಟ್ಟ ಸುಣ್ಣ ಅಥವಾ ಸ್ಪ್ರೇ ಸುಣ್ಣವನ್ನು ಉಪಯೋಗಿಸಬೇಕು. ಸಿಂಪರಣೆ ದ್ರಾವಣವನ್ನು ಆಗಾಗ್ಗೆ ಚೆನ್ನಾಗಿ ಕಲಕಿ ಬಳಸಬೇಕು.

ಹೆಚ್ಚಿನ ಮಾಹಿತಿಗೆ ಪ್ರಧಾನ ವಿಜ್ಞಾನಿ ಮತ್ತು ಮುಖ್ಯಸ್ಥರು, ಐ.ಸಿ.ಎ.ಆರ್-ಕೃಷಿ ವಿಜ್ಞಾನ ಕೇಂದ್ರ, ಗೋಣಿಕೊಪ್ಪಲು, ಕೊಡಗು ಜಿಲ್ಲೆ, ದೂರವಾಣಿ: 08274-247274 ಸಂಪರ್ಕಿಸಬಹುದು.

ಮಾಹಿತಿ: ಕರ್ನಾಟ ವಾರ್ತಾ ಇಲಾಖೆ