ಕಾರವಾರ: ರಾಜ್ಯ ಸಕ್ಕರೆ ಹಾಗೂ ಕಾರ್ಮಿಕ ಸಚಿವ ಹಾಗೂ ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ಅವರಿಗೂ ಇಂದು ಕೋವಿಡ್-19 ಸೋಂಕು ದೃಢ ಪಟ್ಟಿದೆ.

ಸಚಿವ ಹೆಬ್ಬಾರ್ ಅವರು ಬೆಳಗಾವಿ ಹಾಗೂ ಧಾರವಾಡ ಜಿಲ್ಲೆಗಳಲ್ಲಿ ಪ್ರವಾಸ ಕೈಗೊಂಡು ಬಳಿಕ ಬೆಂಗಳೂರಿಗೆ ತೆರಳಿ ಅಲ್ಲಿಯೂ ಕೆಲ ದಿನ ಇದ್ದರು. ಇಂದು ಬೆಳಿಗ್ಗೆ ಅವರು ತಮ್ಮ ಸ್ವಕ್ಷೇತ್ರ ಯಲ್ಲಾಪುರಕ್ಕೆ ವಾಪಸ್ಸಾಗಿದ್ದು, ಈ ವೇಳೆ ಯಲ್ಲಾಪುರದ ತಾಲೂಕಾಸ್ಪತ್ರೆಯಲ್ಲಿ ಕೋವಿಡ್ ಪರೀಕ್ಷೆಗೆ ಒಳಗಾಗಿದ್ದರು. ಜೊತೆಗೆ ಇವರ ಪತ್ನಿ ವನಜಾಕ್ಷಿಯವರೂ ಪರೀಕ್ಷೆಗೆ ಒಳಗಾಗಿದ್ದು ಇದೀಗ ಹೆಬ್ಬಾರ ದಂಪತಿಯ ವರದಿ ಕೊರೋನಾ ಪಾಸಿಟಿವ್ ಬಂದಿದೆ.

ಈ ಬಗ್ಗೆ ಸ್ವತಃ ಟ್ವೀಟ್ ಮಾಡಿರುವ ಸಚಿವ ಶಿವರಾಮ ಹೆಬ್ಬಾರ ಅವರು ‘ಇಂದು ನಾನು ಹಾಗೂ ನನ್ನ ಧರ್ಮಪತ್ನಿ ಕೋವಿಡ್ ಪರೀಕ್ಷೆಗೆ ಒಳಗಾಗಿದ್ದು, ಪರೀಕ್ಷಾ ವರದಿಯಲ್ಲಿ ಇಬ್ಬರಿಗೂ ಸಹ ಪಾಸಿಟಿವ್ ಎಂದು ಬಂದಿದೆ. ಯಾವುದೇ ಹೆಚ್ಚಿನ ರೋಗ ಲಕ್ಷಣಗಳು ಇಲ್ಲದ ಕಾರಣ ವೈದ್ಯರ ಸಲಹೆಯಂತೆ ಹೋಮ್ ಕ್ವಾರಂಟೈನ್‌ನಲ್ಲಿದ್ದು ಚಿಕಿತ್ಸೆ ತೆಗೆದುಕೊಳ್ಳಲಿದ್ದೇನೆ. ಶೀಘ್ರ ಗುಣಮುಖನಾಗುವ ವಿಶ್ವಾಸವಿದೆ’ ಎಂದು ಟ್ವೀಟ್ ಮಾಡಿದ್ದಾರೆ.

ಕಳೆದ ಕೆಲವು ದಿನಗಳಿಂದ ತಮ್ಮ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕದಲ್ಲಿರುವವರು ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳುವಂತೆಯೂ ಸಚಿವ ಹೆಬ್ಬಾರ ಕೋರಿದ್ದಾರೆ.