ಎಂಜಿನಿಯರ್ ಆಗಲು ಹೊರಟವ ಅನ್ನದಾತನಾದ ಕಥೆಯಿದು! ಐದು ದಶಕಗಳ ಹಿಂದೆ ಅಣ್ಣಾವ್ರ ಸಿನಿಮಾ  ‘ಬಂಗಾರದ ಮನುಷ್ಯ’ ನೋಡಿ ಸಾಕಷ್ಟು ಮಂದಿ ನಗರದಿಂದ ತಮ್ಮ ಗ್ರಾಮಕ್ಕೆ ತೆರಳಿ ಕೃಷಿ ಆರಂಭಿಸಿದರು. ಕೊರೊನಾ ಲಾಕ್‍ಡೌನ್‍ನಿಂದಲೂ ಅನೇಕ ಯುವಕರು ಹಳ್ಳಿಗೆ ವಾಪಸ್ಸಾಗಿ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ.

ಅದೇ ರೀತಿ ಎಂಜಿಯರ್ ಆಗುವ ಆಸೆ ಬಿಟ್ಟು ಕೃಷಿಯೇ ನಮ್ಮ ಮೂಲ ಎಂದು ಮೈಸೂರು ಜಿಲ್ಲೆಯ ಎಚ್.ಡಿ.ಕೋಟೆ ತಾಲ್ಲೂಕಿನ ರಾಮೇನಹಳ್ಳಿ ಗ್ರಾಮದ ಮಹೇಶ್ ಸಾಯವಯ ಕೃಷಿಯಲ್ಲಿ ತೊಡಗಿಸಿಕೊಂಡು ಯಶಸ್ವಿಯಾಗಿದ್ದಾರೆ. 35 ವರ್ಷದ ಮಹೇಶ್ ಕಳೆದ 15 ವರ್ಷಗಳಿಂದ ಕೃಷಿಗಾಗಿ ತಮ್ಮನ್ನು ಅರ್ಪಿಸಿಕೊಂಡಿದ್ದಾರೆ.

ತಮಗಿರುವ 20 ಎಕರೆ ಜಮೀನಿನಲ್ಲಿ ಸಮಗ್ರ ಕೃಷಿ ಮೂಲಕ ಯಶಸ್ವಿಯಾಗಿರುವ ಮಹೇಶ್ ವಾರ್ಷಿಕ ಅಂದಾಜು 12 ಲಕ್ಷ ರೂ.ಗೂ ಅಧಿಕ ಲಾಭಗಳಿಸುತ್ತಾರೆ. ಹೈನುಗಾರಿಕೆ, ಮೀನುಗಾರಿಕೆ ಮತ್ತು ಜೇನು ಸಾಕಣಿಕೆ ಹೀಗೆ ಸಮಗ್ರ ಕೃಷಿ ಮೂಲಕ ಮಾದರಿಯಾಗಿದ್ದಾರೆ.

ಎಂಜಿನಿಯರ್ ಆಗಿ ಸಾಧನೆ ಮಾಡಬೇಕೆಂದು ಮಹೇಶ್ ಎಂಜಿನಿಯರಿಂಗ್ ಪದವಿಗೆ ಸೇರಿದ್ದರು. ಆದರೆಕ ಕೃಷಿಯೇ ಮೇಲು ಎಂದು ಊರಿಗೆ ವಾಪಸ್ ಆಗಿ ನೈಸರ್ಗಿಕ ಕೃಷಿ ಆರಂಭಿಸಿದರು. ಆರಂಭದ ದಿನಗಳಲ್ಲಿ ನಿರೀಕ್ಷಿಸಿದ ಆದಾಯ  ಗಳಿಸಿಲು ಸಾಧ್ಯವಾಗದಿದ್ದಾಗ, ಕೃಷಿ ಇಲಾಖೆ ಅಧಿಕಾರಿಗಳ ಸಲಹೆ ಮೂಲಕ ಸಮಗ್ರ ಮತ್ತು ಸಾವಯವ ಕೃಷಿ ಕಡೆ ಗಮನ ಹರಿಸಿದರು.

ಜಮೀನಿನಲ್ಲಿ  4 ಎಕರೆಯಲ್ಲಿ ರೇಷ್ಮೆ, 4 ಎಕರೆಯಲ್ಲಿ 208 ತೆಂಗಿನ ಮರಗಳು, 2 ಎಕರೆಯಲ್ಲಿ ನೆಂದ್ರೆಬಾಳೆ ಹಣ್ಣು, ಏಲಕ್ಕಿ, ಪಚ್ಚಬಾಳೆ, 1 ಎಕರೆಯಲ್ಲಿ ವಿಳ್ಯೆದ ಎಲೆ,  50 ಸಫೋಟ ಮರ, 50 ಕ್ಕಿಂತ ಹೆಚ್ಚಿನ ಹಲಸು, ಬೀಟೆಹುಣ್ಣೆ, ಹೆಬ್ಬೆವು ಮತ್ತು ಕಹಿಬೇವು ಮರಗಳು, ರಾಗಿ, ಜೋಳ, ಭತ್ತ, ಶುಂಠಿ, ತರಕಾರಿ, ಹೂ ಸೇರಿದಂತೆ ಮುಂತಾದ ತೋಟಗಾರಿಕೆ ಬೆಳೆಗಳನ್ನು ಬೆಳೆಯುತ್ತಿದ್ದಾರೆ.

ಮೀನು ಸಾಕಣಿಕೆಯಿಂದ 10 ಲಕ್ಷ ಲಾಭ:

20 ಜೇನು ಸಾಕಣಿಕೆ, 12 ಹಸು ಸಾಕಣಿಕೆ ಹಾಗೂ 4 ಎಕರೆಯಲ್ಲಿ ಮೀನು ಸಾಕಣಿಕೆ ಮಾಡುತ್ತಿದ್ದಾರೆ. ಇಷ್ಟಕೆ ಸೀಮಿತವಾದ ಮಹೇಶ್ ‘ಹೊನ್ನೇರು ಮೀನುಮರಿ ಪಾಲನಾ ಕೇಂದ್ರ’ ಸ್ಥಾಪಿಸಿ ಎಂಟು ವರ್ಷಗಳಿಂದ ನಡೆಸುತ್ತಿದ್ದಾರೆ. ಮೀನುಗಾರಿಕೆ ಇಲಾಖೆ ವತಿಯಿಂದ ಕಬಿನಿಯಲ್ಲಿ ಮೀನುಮರಿಗಳನ್ನು ಖರೀದಿಸಿ ಅವುಗಳನ್ನು ತಮ್ಮ ಮೀನಿನ ತೊಟ್ಟಿಯಲ್ಲಿ ಬೆಳೆಸಿ ಮಾರಾಟ ಮಾಡುತ್ತಾರೆ. ಇಲ್ಲಿ ಕಾಟ್ಲಾ, ರೇವು, ಹುಲ್ಲುಗೆಂಡೆ, ಬ್ರಿಗಲ್, ಸಮಂತಗೆಂಡೆ ಹಾಗೂ ಮುಂತಾದ ಮೀನು ಸಾಕಿ ಮಾರಾಟ ಮಾಡುತ್ತಿದ್ದಾರೆ. ಇದರಿಂದ ಇಲ್ಲಿಯವರೆಗೆ 10 ಲಕ್ಷ  ವರೆಗೆ ಆದಾಯ ಗಳಿಸಿದ್ದಾರೆ.

ಸಮಸ್ಯೆಗೆ ನೈಸರ್ಗಿಕ ಪರಿಹಾರ:

ಮಹೇಶ್ ಕೃಷಿ ಸಮಸ್ಯೆಗೆ ನೈಸರ್ಗಿಕ ಗೊಬ್ಬರ ಬಳಸುತ್ತಾರೆ. ಇಲಿಗಳು ಬೆಳೆಗಳನ್ನು ನಾಶ ಮಾಡುವುದನ್ನು ಹಾಗೂ ಮೀನುಗಳನ್ನು ಕಪ್ಪೆಗಳು ತಿನ್ನುವುದನ್ನು ತಡೆಗಟ್ಟಲು ಹೊಲದಲ್ಲಿ ಮತ್ತು ಮೀನು ಸಾಕಣಿಕೆ ತೋಟಿಗೆ ಸ್ವತಃ ತಾವೇ ಹಿಡಿದ ಹಾವುಗಳನ್ನು ಬಿಟ್ಟಿದ್ದಾರೆ. ಇದುವರೆಗೂ ಒಟ್ಟು 200 ಹಾವುಗಳನ್ನು ಹಿಡಿದು ತಮ್ಮ ಜಮೀನಿನಲ್ಲಿ ಬಿಟ್ಟಿದ್ದಾರೆ.

ಪಕ್ಷಿಗಳಿಂದ ಬೆಳೆ ರಕ್ಷಿಸಿಕೊಳ್ಳಲು  ಜಮೀನಿನಲ್ಲಿ ಆಲದ ಮರ ಮತ್ತು ಚೇರಿಮರಗಳನ್ನು ಬೆಳೆಸಿದ್ದಾರೆ. ಯಾವುದೇ ಬೆಳೆಗಳನ್ನು ಬೆಳೆಯುವ ಮೊದಲೇ ಬೆಳೆಯ ಸಂಪೂರ್ಣ ಮಾಹಿತಿ ತಿಳಿದುಕೊಳ್ಳುತ್ತೇನೆ. ಇದಕ್ಕಾಗಿ ನಿತ್ಯ ನಾಲ್ಕು ಗಂಟೆಗಳ ಕಾಲ ಅಧ್ಯಯನ ಮಾಡುತ್ತೇನೆ. ರಾಸಾಯನಿಕ ಗೊಬ್ಬರ ಹಾಕದೆ ಮಣ್ಣಿನ ಲವತ್ತತೆ ಹೆಚ್ಚಿಸಲು ಪ್ರಯತ್ನಿಸುತ್ತೇನೆ. 

ಹಸು ಸಗಣಿ, ಕೋಳಿ ಮತ್ತು ಮೀನು ಸಾಕಣಿಕೆಯಿಂದ ದೊರೆಯುವ ತ್ಯಾಜ್ಯದಿಂದ ಗೊಬ್ಬರ ತಯಾರಿಸಿ ಬಳಸುತ್ತಾರೆ. ಕಳೆದ 12 ವರ್ಷಗಳಿಂದಲೂ ಯಾವುದೇ ರಾಸಯನಿಕ ಗೊಬ್ಬರಗಳನ್ನು  ಸಿಂಪಡಿಸಿಲ್ಲ’ ಎನ್ನುತ್ತಾರೆ ಮಹೇಶ್. ಯುವಕೃಷಿಕ ಮಹೇಶ್ ಅವರ ಸಂಪರ್ಕಕ್ಕೆ ಮೊಬೈಲ್ ಸಂಖ್ಯೆ 9845748514.

ಮಾಹಿತಿ: ವಾರ್ತಾ ಇಲಾಖೆ.