ಉತ್ತರ ಕನ್ನಡ: ಅಂಕೋಲಾದ ಬೇಲೇಕೇರಿ ಮ್ಯಾಂಗನಿಸ್ ಪ್ರಕರಣದಿಂದ ಬಿಚ್ಚಿಕೊಂಡಿದ್ದ 2015ರಲ್ಲಿನ ಅಕ್ರಮ ಗಣಿಗಾರಿಕೆ ಪ್ರಕರಣ ಮತ್ತೆ ಮುನ್ನೆಲೆಗೆ ಬಂದಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಹೊಸಪೇಟೆಯ ಗಣಿ ಮಾಲೀಕರ ಕಚೇರಿ ಮತ್ತು ಮನೆಗಳಲ್ಲಿ ಎಸ್.ಐ.ಟಿ ತನಿಖೆ ಮುಂದುವರಿಸಿದೆ. ಹೊಸಪೇಟೆಯ ಗಣಿ ಮಾಲೀಕರಾದ, ಅರಣ್ಯ ಸಚಿವ ಆನಂದ್ ಸಿಂಗ್ ಸಂಬಂಧಿ ರಾಣಿ ಸಂಯುಕ್ತ ಅವರ ಎರಡು ಮನೆ ಮತ್ತು ಕಚೇರಿಯ ಮೇಲೆ ಎಸ್ಐಟಿ ದಾಳಿ ನಡೆಸಿದೆ.

ಜೋಳದ ರಾಶಿ ಗುಡ್ಡದ ಬಳಿಯಿರುವ ರಾಣಿ ಸಂಯುಕ್ತ ಅವರ ಹೊಸ ಮನೆ, ಕಾಲೇಜು ರಸ್ತೆಯಲ್ಲಿನ ಹಳೇ ನಿವಾಸ ಹಾಗೂ ಎಂ.ಪಿ.ಪ್ರಕಾಶ್ ನಗರದಲ್ಲಿರುವ ಕಚೇರಿಯ ಮೇಲೆ ದಾಳಿ ನಡೆಸಲಾಗಿದೆ. ಹತ್ತಕ್ಕೂ ಹೆಚ್ಚು ಅಧಿಕಾರಿಗಳ ತಂಡದಿಂದ ತನಿಖೆ ಮುಂದುವರಿದಿದೆ.

ರಾಣಿ ಸಂಯುಕ್ತ ಅವರು ರಾಜ್ಯ ಬಿಜೆಪಿ ಮಹಿಳಾ ಮೋರ್ಚಾದ ಉಪಾಧ್ಯಕ್ಷೆ ಆಗಿದ್ದಾರೆ. ರಾಣಿ ಸಂಯುಕ್ತ ಒಡೆತನದ ಕೃಷ್ಣ ಮಿನರಲ್ಸ್ ಮೇಲೆ ಇದ್ದ ಹಳೆ ಪ್ರಕರಣದ ಹಿನ್ನೆಲೆಯಲ್ಲಿ ದಾಳಿ ನಡೆಸಲಾಗಿದೆ. ಲಕ್ಷ್ಮಿನಾರಾಣ ಹಾಗೂ ರಾಘವೇಂದ್ರ ಎಂಬ ಇಬ್ಬರು ಇನ್ ಸ್ಪೆಕ್ಟರ್ ನೇತೃತ್ವದಲ್ಲಿ ಪ್ರಕರಣದ ತನಿಖೆ ನಡೆಯುತ್ತಿದೆ.