ಕಬ್ಬು ಬೆಳೆಗೆ ಗುಡ್ ಬಾಯ್ ಹೇಳಿ ಟಗರು ಸಾಕಿ ತಿಂಗಳಿಗೆ 50 ಸಾವಿರ ರೂ.ದಿಂದ ಒಂದು ಲಕ್ಷ ರೂ. ಆದಾಯ ಗಳಿಸುವ ಸರಳ ವಿಧಾನ ಕಂಡುಕೊಂಡಿದ್ದಾರೆ ಈ ರೈತ. ಅತಿ ಕಡಿಮೆ ಖರ್ಚಿನಲ್ಲಿ ಹೆಚ್ಚು ಲಾಭ ಗಳಿಸುವ ಸುಲಭ ಸೂತ್ರವನ್ನೂ ಅವರ ಹೇಳಿಕೊಡುತ್ತಿದ್ದಾರೆ.

ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲ್ಲೂಕಿನ ಅವರಾದಿ ಗ್ರಾಮದ ರೈತ ಲಕ್ಷ್ಮಣ ದಳವಾಯಿ ಅವರು ಟಗರು ಸಾಕಾಣಿಕೆಯಿಂದ ಯಶಸ್ಸು ಕಾಣುತ್ತಿದ್ದಾರೆ. ಮೂರು ಎಕರೆ ಜಮೀನು ಹೊಂದಿರುವ ಅವರು ಬಹಳಷ್ಟು ವರ್ಷಗಳಿಂದ ಕಬ್ಬು ಬೆಳೆಯುತ್ತಿದ್ದರು. ಕಬ್ಬಿಗೆ ಸರಿಯಾದ ದರ ದೊರೆಯದೆ ಕಷ್ಟಪಟ್ಟಿದ್ದರು.

ಇದನ್ನೂ ಓದಿ: ಎರಡು ಗುಂಟೆಯಲ್ಲಿ ಲಕ್ಷ ರೂ. ಆದಾಯ ಕೊಡುವ ಹೂವು

ಹೀಗಾಗಿ, ಕೃಷಿಯೊಂದಿಗೆ ಟಗರು ಸಾಕಾಣಿಕೆ ಕನಸು ಕಂಡು 12 ವರ್ಷಗಳ ಹಿಂದೆ ಕೇವಲ 3 ಟಗರು ತಂದು ಸಾಕಲು ಶುರು ಮಾಡಿದರು. ಮೊದಲ ವರ್ಷ ಮೂರು ಟಗರನ್ನು 60 ಸಾವಿರ ರೂ.ಗೆ ಮಾರಿದರು. ಆ ಹಣದಲ್ಲಿ ಮತ್ತಷ್ಟು ಟಗರು ತಂದರು. ಹೀಗೆ ಕ್ರಮೇಣ ಹೆಚ್ಚಿಸುತ್ತಾ ಈಗ ಅಂದಾಜು 60 ರಿಂದ 80 ಟಗರುಗಳನ್ನು ಸಾಕುತ್ತಿದ್ದಾರೆ. ಒಂದು ಟಗರು ಮರಿಯಿಂದ ಪ್ರತಿ ತಿಂಗಳು ಒಂದು ಸಾವಿರ ರೂ.ದಿಂದ 1500 ರೂ. ಆದಾಯ ಗಳಿಸುತ್ತಿದ್ದಾರೆ.

ವಿಡಿಯೊ ವಿವರಣೆ: ಲಕ್ಷ್ಮಣ ದಳವಾಯಿ ಅವರ ಪರವಾಗಿ ರೈತ ಸುರೇಶ ಕಲ್ಪಿಟ್ಟಿ.

ಅಲ್ಪ ಬಂಡವಾಳ, ಅಧಿಕ ಲಾಭ
ಮೂರರಿಂದ ಆರು ತಿಂಗಳಿನ ಮರಿಗಳನ್ನು ಅಮೀನಗಡ, ಮುಧೋಳ, ಕೆರೂರ ಸಂತೆಯಲ್ಲಿ 5-6 ಸಾವಿರ ರೂ.ದಂತೆ ಖರೀದಿಸಿ 10 ತಿಂಗಳವರೆಗೆ ಸಾಕಿ ಬಳಿಕ ಮಾರುತ್ತಾರೆ. ಸುಸಜ್ಜಿತವಾದ ಎರಡು ಶೆಡ್‌ಗಳನ್ನು ನಿರ್ಮಿಸಿದ್ದಾರೆ. 25 ಅಡಿ ಮತ್ತು 30 ಅಡಿ ಉದ್ದಳತೆಯಲ್ಲಿ ಗಾಳಿ, ಬೆಳಕು ಲಭ್ಯವಾಗುವಂತೆ ವ್ಯವಸ್ಥೆ ಮಾಡಿದ್ದಾರೆ. ದುಬಾರಿ ಶೆಡ್ ಗಳನ್ನು ಕಟ್ಟುವ ಬದಲು ಸ್ಥಳೀಯವಾಗಿಯೇ ಸಿಗುವ ವಸ್ತುಗಳನ್ನು ಬಳಸಿ ಶೆಡ್ ನಿರ್ಮಿಸಿದರೂ ಸಾಕು ಎನ್ನುತ್ತಾರೆ ಲಕ್ಷ್ಮಣ.

ಇದನ್ನೂ ಓದಿ: ಎರಡು ಗುಂಟೆಯಲ್ಲಿ ಲಕ್ಷ ರೂ. ಆದಾಯ ಕೊಡುವ ಹೂವು

ಟಗರುಗಳು ಆಹಾರ ತಿನ್ನಲು ಹಾಗೂ ರಾತ್ರಿ ವೇಳೆ ವಿಶ್ರಾಂತಿಗಾಗಿ ಬಿದಿರು ಮತ್ತು ಹುಲ್ಲಿನ ಚಾಪೆಗಳನ್ನು ಬಳಸಿ 50 ಅಡಿ ಮತ್ತು 30 ಅಡಿ ಉದ್ದಳತೆಯ ದೇಶಿ ಶೆಡ್ ನಿರ್ಮಿಸಿದ್ದಾರೆ. ಗೋವಿನಜೋಳ, ರೇಷ್ಮೆ ಎಲೆ, ಹುಲ್ಲು, ಸಜ್ಜಿ ಮೇವನ್ನು ಸಣ್ಣಗೆ ಕತ್ತರಿಸಿ ನಿಯಮಿತವಾಗಿ ನೀಡುತ್ತಾರೆ.

ಟಗರಿಗೆ ಡಿನ್ನರ್ ಮ್ಯೂಸಿಕ್
ಶೆಡ್‌ನಲ್ಲಿ ಸ್ಪೀಕರ್‌ ಅಳವಡಿಸಿದ್ದು, ಟಗರುಗಳು ಇಂಪಾದ ಸಂಗೀತ ಕೇಳುತ್ತಾ ಮೆಲ್ಲುವ ವ್ಯವಸ್ಥೆ ಮಾಡಿರುವುದು ವಿಶೇಷವಾಗಿದೆ. ಹುಲ್ಲು ಕತ್ತರಿಸಲು ಆಧುನಿಕ ಯಂತ್ರ ಬಳಸುತ್ತಿದ್ದಾರೆ. ಟಗರುಗಳ ಗಂಜಲ ಮತ್ತು ಕೊಟ್ಟಿಗೆ ತೊಳೆದ ನೀರನ್ನು ತೋಟಕ್ಕೆ ಸಾವವಯ ಗೊಬ್ಬರವಾಗಿ ಬಳಸುತ್ತಿದ್ದಾರೆ.

ಎಳನೀರ ಬಗ್ಗೆ ನಿಮಗೇನು ಗೊತ್ತು? ತೆಂಗು ಕೃಷಿಯಲ್ಲಿದೆ ಆದಾಯದ ಗುಟ್ಟು

10 ತಿಂಗಳಿಗೆ ಶೇ. 100 ಪಟ್ಟು ಬೆಲೆ
“6 ಸಾವಿರಕ್ಕೆ ಒಂದರಂತೆ 3 ತಿಂಗಳಿನ ಮರಿಗಳನ್ನು ತಂದು 10 ತಿಂಗಳು ಮೇಯಿಸಿದರೆ ಒಂದೊಂದು ಟಗರು 22ಸಾವಿರ ರೂ. ದಿಂದ 25 ಸಾವಿರ ರೂ.ಗೆ ಮಾರಾಟ ಆಗುತ್ತವೆ. ಈ ವರ್ಷ 12 ಲಕ್ಷ ರೂ.ದಿಂದ 13 ಲಕ್ಷ ರೂ. ಆದಾಯ ಬರುವ ನಿರೀಕ್ಷೆ ಇದೆ’ ಎನ್ನುತ್ತಾರೆ ಲಕ್ಷ್ಮಣ ದಳವಾಯಿ.

‘ಮರಿಗಳ ಖರೀದಿ, ಅವುಗಳಿಗೆ ಆಹಾರ, ಆರೈಕೆ ಹೀಗೆ ಎಲ್ಲ ಖರ್ಚು ತೆಗೆದು ವರ್ಷದಲ್ಲಿ 7 ಲಕ್ಷ ರೂ. ದಿಂದ 8 ಲಕ್ಷ ರೂ. ವರೆಗೆ ವರಮಾನ ಸಿಗುತ್ತದೆ. ಯಾರು ಬೇಕಾದರೂ ಈ ರೀತಿ ಟಗರು ಸಾಕಿ ಆದಾಯಕ್ಕೆ ದಾರಿ ಕಂಡುಕೊಳ್ಳಬಹುದು’ ಎಂದು ಟಗರು ಸಾಕಾಣಿಕೆಯ ಅನುಭವ ಹಂಚಿಕೊಂಡರು.

‘ಟಗರುಗಳ ಖರೀದಿಗಾಗಿ ಬೆಂಗಳೂರಿನ ಕೆಲವು ಕಂಪನಿಗಳ ಏಜಂಟರು ತೋಟಕ್ಕೆ ಬರುತ್ತಾರೆ. ಇದರಿಂದಾಗಿ, ಮಾರಾಟ ಮಾಡೋದು ತೊಂದರೆ ಇಲ್ಲ. ಪ್ರತಿ ಶುಕ್ರವಾರ ಮುಧೋಳದಲ್ಲಿ ಕುರಿ, ಟಗರು ವಹಿವಾಟಿನ ಸಂತೆ ನಡೆಯುತ್ತದೆ. ಅಲ್ಲಿ ಒಯ್ದರೆ ಟಗರು ಖರೀದಿಸಿ ಕೈಯಲ್ಲಿ ಹಣ ಕೊಡುತ್ತಾರೆ. ಹೀಗಾಗಿ ಟಗರು ಸಾಕೋದು ಬ್ಯಾಂಕ್ ಇದ್ದಂತೆ’ ಎನ್ನುತ್ತಾರೆ ಲಕ್ಷ್ಮಣ.

ಇದನ್ನೂ ಓದಿ: ಕೂದಲು ಕಪ್ಪಗಾಗಬೇಕೆ? ಕರಿ ಬೇವಿನಲ್ಲಿದೆ ಆರೋಗ್ಯದ ಗುಟ್ಟು

‘ನಿತ್ಯ ಎರಡು ಬಾರಿ ಶೆಡ್‌ಗಳನ್ನು ಸ್ವಚ್ಛ ಮಾಡುವುದರಿಂದ ರೋಗಗಳು ಬರೋದಿಲ್ಲ. ಪತ್ನಿ ಮಾಯವ್ವ ಶೆಡ್‌ಗಳ ಸ್ವಚ್ಛತೆ ಮೊದಲಾದ ಕೆಲಸಗಳಲ್ಲಿ ಸಹಕರಿಸುತ್ತಾರೆ. ಟಗರಗುಳ ಸಾಕಣೆಯಿಂದ ಬದುಕು ಅನುಕೂಲಕರ ಆಗಿದೆ’ ಎಂದು ಸಂತಸ ಹಂಚಿಕೊಂಡರು. ಲಕ್ಷ್ಮಣ ಅವರ ಸಂಪರ್ಕಕ್ಕೆ ಮೊ. 9901130351.