ಅಡಿಕೆ, ತೆಂಗಿನ ಮರ ಇದ್ದಕ್ಕಿದ್ದಂತೆ ಇಳುವರಿ ಕಡಿಮೆಯಾಗಿ ಸೊರಗುತ್ತಿದ್ದರೆ ಅದಕ್ಕೆ ಹಲವು ಕಾರಣಗಳು ಇವೆ. ಕೆಲವೊಮ್ಮೆ ಎಷ್ಟು ಔಷಧೋಪಚಾರ ನಡೆಸಿದರೂ ಅಡಿಕೆ, ತೆಂಗಿನ ಮರಗಳನ್ನು ಉಳಿಸಿಕೊಳ್ಳುವುದು ಕಷ್ಟವಾಗುತ್ತದೆ.

ಅಡಿಕೆ ಮತ್ತು ತೆಂಗಿನ ಮರಗಳನ್ನು ಕಾಡುತ್ತಿರುವ ಕೀಟವನ್ನು ಕೃಷಿ ತಜ್ಞರು ಪತ್ತೆ ಮಾಡಿದ್ದಾರೆ. ಅಮೇರಿಕನ್ ರುಗೋಸ್ ಎನ್ನುವ ಕೀಟ ಅಡಿಕೆ, ತೆಂಗಿನ ಮರಗಳ ರಸ ಹೀರಿ ಸೊರಗುವಂತೆ ಮಾಡುತ್ತಿವೆ. ಇದೊಂದು ಸುರುಳಿಯಾಕಾರದ ಬಿಳಿ ನೊಣ. ಇದು ಒಂದು ತೋಟದಿಂದ ಮತ್ತೊಂದು ತೋಟಕ್ಕೆ ವ್ಯಾಪಿಸುವುದರಿಂದ ರೈತರು ತಕ್ಷಣ ಅದನ್ನು ನಿಯಂತ್ರಿಸಬೇಕು.

ಈ ನೊಣ ಅಲ್ಯುರೊಡಿಕಸ್ ರುಗಿಯೋಪರಿಕುಲೆಟಸ್ ಮಾರ್ಟಿನ್ ಎಂಬ ಜಾತಿಗೆ ಸೇರಿದ್ದಾಗಿದೆ. ತೆಂಗಿನ ಮರಗಳಲ್ಲಿ 2004 ರಲ್ಲಿ ಮಾರ್ಟಿನ್ ರವರು ಬೆಲೀಜ್‍ನಲ್ಲಿ ಕಂಡು ಹಿಡಿದರು. ಈ ಕೀಟ 200 ರೀತಿಯ ಗಿಡಗಳನ್ನು ಕಾಡಬಲ್ಲದು. ಕೀಟದ ಹಾವಳಿ ಹೆಚ್ಚಾಗಿರುವುದರಿಂದ ರೈತರು ನಿಯಂತ್ರಣ ಕ್ರಮಗಳನ್ನು ಕೈಗೊಳ್ಳಬೇಕು.

ಕೀಟದ ಲಕ್ಷಣಗಳು:

ಇದು ರಸ ಹೀರುವ ಕೀಟವಾಗಿದೆ. ಗಾತ್ರದಲ್ಲಿ ಚಿಕ್ಕದ್ದಾಗಿದ್ದು, ಮೈತುಂಬ ಬಿಳಿ ಬಣ್ಣದ ಮೇದದಂತಹ ಹುಡಿ ಇರುತ್ತದೆ. ಕೀಟವು ಗಾಳಿಯ ಮೂಲಕ ಒಂದು ತೋಟದಿಂದ ಮತ್ತೊಂದು ತೋಟಕ್ಕೆ ಹರಡುತ್ತದೆ. ಮರಿಹುಳುಗಳು ಹಾಗೂ ಪ್ರೌಢ ಕೀಟಗಳು ಸತತವಾಗಿ ಎಲೆಗಳ ಕೆಳಭಾಗದಲ್ಲಿ ಕುಳಿತು ರಸ ಹೀರುತ್ತವೆ.

ನಂತರ ಎಲೆಗಳು ಹಳದಿ ಬಣ್ಣಕ್ಕೆ ತಿರುಗುತ್ತವೆ. ಮುದುಡುತ್ತವೆ ಹಾಗೂ ಕ್ರಮೇಣವಾಗಿ ಒಣಗಲು ಪ್ರಾರಂಭಿಸುತ್ತವೆ. ಎಲೆಗಳ ಮೇಲ್ಭಾಗದಲ್ಲಿ ಕಪ್ಪು ಬಣ್ಣದ ಶಿಲೀಂಧ್ರ ಮಸಿ ಬಳಿದಂತೆ ಕಾಣಿಸಿಕೊಳ್ಳುತ್ತದೆ ಹಾಗೂ ಸಸ್ಯಗಳಲ್ಲಿ ದ್ಯುತಿ ಸಂಶ್ಲೇಷಣೆ ಕ್ರಿಯೆ ಕಡಿಮೆಯಾಗುತ್ತದೆ.

ನಿಯಂತ್ರಣ ಕ್ರಮಗಳು:

ಕೀಟ ಬಾಧೆಗೆ ಒಳಪಟ್ಟ ಗಿಡಗಳ ಎಲೆಗಳನ್ನು ಕಿತ್ತು ತೆಗೆದು ಸುಡಬೇಕು. ಹಳದಿ ಬಣ್ಣದ ಬಲೆಗಳನ್ನು ಅಥವಾ ಹಳದಿ ಬಣ್ಣದ ಡ್ರಾಯಿಂಗ್ ಪೇಪರ್‍ಗೆ ಹರಳೆಣ್ಣೆ ಹಚ್ಚಿ ಅಲ್ಲಲ್ಲಿ ತೋಟದಲ್ಲಿ ನೇತು ಹಾಕಬೇಕು. ಹಳದಿ ಬಣ್ಣವು ಕೀಟವನ್ನು ಆಕರ್ಷಿಸುವುದರಿಂದ ಕೀಟಗಳು ಬಲೆಗಳಿಗೆ ಅಂಟಿಕೊಳ್ಳುತ್ತವೆ.

ತೋಟದ ಪರಿಸರದ ವ್ಯವಸ್ಥೆಯಲ್ಲಿ ಕಪ್ಪು ಶಿಲೀಂಧ್ರವನ್ನು ಭಕ್ಷಿಸುವ ಜೀರುಂಡೆ ಲಿಯೋಕ್ರೇನಸ್ ನೀಲ್ಗಿರಿಯೆನ್ಸ್‍ಗಳನ್ನು ಸಂರಕ್ಷಿಸಬೇಕು.  ಎಲೆಗಳ ಕೆಳಭಾಗದಲ್ಲಿ ಕೂತಿರುವ ಕೀಟಗಳಿಗೆ ನೀರು ಬಿಡಬೇಕು ಹಾಗೂ ಎಲೆಗಳ ಮೇಲೆ ಬೆಳೆದಿರುವ ಕಪ್ಪು ಶಿಲೀಂಧ್ರ ನಿಯಂತ್ರಿಸಲು ಗಂಜಿ ನೀರನ್ನು ಉಪಯೋಗಿಸಬೇಕು.

ಕೀಟಗಳ ಬಾಧೆ ತೀವ್ರವಾಗಿದ್ದು, ಗಿಡಗಳ ಎತ್ತರ ಕಡಿಮೆ ಇದ್ದಲ್ಲಿ 0.5 % ಬೇವಿನ ಎಣ್ಣೆ ಮತ್ತು 2.5 ಮಿ.ಲೀ. ಶ್ಯಾಂಪುವನ್ನು ಒಂದು ಲೀಟರ್ ನೀರಿಗೆ ಬೆರೆಸಿ ಮರಗಳಿಗೆ ಸಿಂಪಡಿಸಬೇಕು. ರೋಗದ ಹಾವಳಿ ಜಾಸ್ತಿಯಾಗಿದ್ದಲ್ಲಿ ನಿಮಾಝೋಲ್ 10000 ppm 2 ಮಿ.ಲಿ ಅನ್ನು ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪರಣೆ ಮಾಡಬೇಕು.

ಹೆಚ್ಚಿನ ಮಾಹಿತಿಗಾಗಿ ತೋಟಗಾರಿಕೆ ಮಾಹಿತಿ ಮತ್ತು ಸಲಹಾ ಕೇಂದ್ರ, ಅಥವಾ ದೂರವಾಣಿ ಸಂಖ್ಯೆ  7829512236 ನ್ನು ಸಂಪರ್ಕಿಸಬಹುದಾಗಿದೆ.