Select Page

ಅಧಿಕ ಮಳೆಯಿಂದ ಉದ್ದು-ಹೆಸರು ಸಸ್ಯ ಸಂರಕ್ಷಣಾ ಕ್ರಮಗಳು

ಅಧಿಕ ಮಳೆಯಿಂದ ಉದ್ದು-ಹೆಸರು ಸಸ್ಯ ಸಂರಕ್ಷಣಾ ಕ್ರಮಗಳು

ಮಳೆ ಹಾಗೂ ತಂಪು ವಾತಾವರಣದಿಂದಾಗಿ ಹೆಸರು ಮತ್ತು ಉದ್ದು ಬೆಳೆಯಲ್ಲಿ ರೋಗ ಮತ್ತು ಕೀಟಗಳು ಬರುವ ಸಾಧ್ಯತೆಗಳು ಹೆಚ್ಚಾಗಿವೆ. ಹಳದಿ ಎಲೆ ನಂಜಾಣು, ನುಸಿ ಕಾಟ, ತುಕ್ಕು ರೋಗ ಇಂಥ ಹಲವು ಸಮಸ್ಯೆಗಳು ಉಂಟಾಗುವ ಸಾಧ್ಯತೆಗಳು ಇವೆ.

ಆ ಹಿನ್ನೆಲೆಯಲ್ಲಿ ಹೆಸರು ಹಾಗೂ ಉದ್ದು ಬೆಳೆಯನ್ನು ಯಾವ ರೀತಿ ರಕ್ಷಣೆ ಮಾಡಬೇಕು. ಯಾವೆಲ್ಲ ಔಷಧಗಳನ್ನು ಸಿಂಪಡಿಸಬೇಕು ಎನ್ನುವುದು ಸೇರಿದಂತೆ ಅವಶ್ಯಕ ಸಂಸ್ಯ ಸಂರಕ್ಷಣಾ ಕ್ರಮಗಳನ್ನು ಅನುಸರಿಸುವಂತೆ ಕೃಷಿ ಇಲಾಖೆ ಸಲಹೆ ನೀಡಿದೆ.

ಮೊದಲಿಗೆ ರೈತರು ತಮ್ಮ ಜಮೀನಿನಲ್ಲಿ ನೀರು ನಿಲ್ಲದ ಹಾಗೆ ಬಸಿಗಾಲುವೆ ಮಾಡಿ ನೀರು ಹೋರ ಹಾಕಬೇಕು. ಮುಂಜಾಗ್ರತಾ ಕ್ರಮವಾಗಿ ನೀರಿನಲ್ಲಿ ಕರಗುವ 19:19:19 ಗೊಬ್ಬರವನ್ನು (3 ಗ್ರಾಂ. ಪ್ರತಿ ಲೀ. ನೀರಿಗೆ) ಹಾಗೂ ಕಾರ್ಬನ್‍ಡೈಜಿಮ್‍ನ್ನು (3 ಗ್ರಾಂ. ಪ್ರತಿ ಲೀ. ನೀರಿಗೆ) ಬೆಳೆಗಳಿಗೆ ಸಿಂಪರಣೆ ಮಾಡಬೇಕು.

ಹಳದಿ ಎಲೆ ನಂಜಾಣು:
ಈ ರೋಗಕ್ಕೆ ಸಂಬಂಧಿಸಿದಂತೆ ಮೊದಲು ಎಲೆಯ ಮೇಲೆ ಹಳದಿ ಬಣ್ಣದ ಚುಕ್ಕೆ ಆಕಾರದ ಚಿಹ್ನೆಗಳು ಕಂಡು ಬರುತ್ತವೆ. ನಂತರದಲ್ಲಿ ಒಂದಕ್ಕೊಂದು ಚುಕ್ಕೆಗಳು ಕೂಡಿ ಸಂಪೂರ್ಣ ಎಲೆಗಳು ಹಳದಿ ಬಣ್ಣಕ್ಕೆ ತಿರುಗುತ್ತವೆ. ತದನಂತರ ಸಂಪೂರ್ಣವಾಗಿ ಕಂದು ಬಣ್ಣಕ್ಕೆ ತಿರುಗಿ ಒಣಗುತ್ತವೆ. ಈ ನಂಜಾಣು ಬಿಳಿ ನೊಣದಿಂದ ಪ್ರಸರಣಗೊಳ್ಳುತ್ತದೆ.

ಅದನ್ನು ಹತೋಟಿ ಮಾಡಲು ರೈತರು ಪ್ರತಿ ಎಕರೆಗೆ 8-10 ಹಳದಿ ಅಂಟು ಬಲೆಗಳನ್ನು ಅಳವಡಿಸಬೇಕು. ಒಂದು ಮಿ.ಲೀ ಬೇವಿನ ಎಣ್ಣೆಯನ್ನು ಒಂದು ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು. ರೈತರು ಯಾವುದೇ ರಾಸಾಯನಿಕ ಕೀಟನಾಶಕದೊಂದಿಗೆ ಬೇವಿನ ಎಣ್ಣೆಯನ್ನು ಮಿಶ್ರಣ ಮಾಡಬಾರದು. ಇಮಿಡಾಕ್ಲೋಪ್ರಿಡ್ 0.5 ಮಿ. ಲೀ. ಯನ್ನು ಒಂದು ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು.

ನುಸಿಗಳ ಕಾಟ:
ನುಸಿಗಳ ನಿರ್ವಹಣೆಗಾಗಿ ಮಳೆ ಬಂದ ಎರಡು ಮೂರು ದಿನಗಳ ನಂತರ ಥ್ರೀಪ್ಸ ಹಾಗೂ ಬೋರಾನ್ ಕೊರತೆಯಿಂದ ಹೆಸರು ಮತ್ತು ಉದ್ದು ಬೆಳೆಯಲ್ಲಿ ಗಿಡದ ತುತ್ತ ತುದಿ (ನೆತ್ತಿ) ಸುಡುವುದು ಕಂಡು ಬಂದರೆ ರೈತರು ಥಿಯೋಮಿಥಾಕ್ಸಮ್ 0.5 ಗ್ರಾಂ. ಮತ್ತು ಬೋರಾನ್ 1 ಗ್ರಾಂ. ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು.

ತುಕ್ಕು ರೋಗ:
ಈ ರೋಗ ಕಂಡು ಬಂದಲ್ಲಿ (ಕಬ್ಬಿಣ/ಇಟ್ಟಂಗಿ/ತಾಮ್ರ ರೋಗ) ಸಾಫ್ (SAAF) 2ಗ್ರಾಂ. ಹೆಕ್ಸಾಕೋನಾಜೋಲ್ 1 ಮೀ.ಲೀ. ಅಥವಾ ಪ್ರೋಪಿಕೊನಾಜೋಲ್ 1 ಮಿ.ಲೀ. ಅನ್ನು ಪ್ರತಿ ಲೀಟರ ನೀರಿಗೆ ಬೆರೆಸಿ ಸಿಂಪಡಿಸುವುದು. ಮಳೆ ನಿಂತ ನಂತರ ಮಣ್ಣು ಹದವಾದಾಗ ಎಡೆಗುಂಟೆ ಹಾಯಿಸುವುದರಿಂದ ಬೆಳೆಗಳು ಸಧೃಢವಾಗಿರುತ್ತವೆ ಎಂದು ಕಲಬುರಗಿಯ ಜಂಟಿ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.

Leave a reply

Your email address will not be published. Required fields are marked *