ನೀರು ಜೀವನಕ್ಕೆ ಅವಶ್ಯವಿರುವ ಅತ್ಯಮೂಲ್ಯ ನೈಸರ್ಗಿಕ ಸಂಪನ್ಮೂಲ. ಭೂಮಿಯ ಬಹುಭಾಗ ನೀರಿನಿಂದಲೇ ಆವರಿಸಿದ್ದರೂ, ಬಳಕೆಗೆ ಯೋಗ್ಯವಾದ ನೀರು ಬಹಳ ಕಡಿಮೆ. ಹಾಗಾಗಿ ಕೃಷಿಯಲ್ಲಿ ನೀರಿನ ಮೂಲವೇ ರೈತರಿಗೆ ಬಹು ಮುಖ್ಯ ಅಂಶವಾಗಿದೆ.

ನೈಸರ್ಗಿಕ ವರದಾನವಾಗಿ ಸಿಕ್ಕಿರುವ ನೀರನ್ನು ಮಿತವಾಗಿ ಬಳಸಿ ಉತ್ತಮ ಗುಣಮಟ್ಟದ ಇಳುವರಿಯನ್ನು ಪಡೆಯುವಲ್ಲಿ ಅನೇಕ ರೈತರು ಮಾದರಿಯಾಗಿದ್ದಾರೆ. ಅದರಲ್ಲಿ ಪುತ್ತೂರಿನ ರೈತ ಮಹಿಳೆಯ ಅಡಿಕೆ ಕೃಷಿ ರಾಜ್ಯ ಸರ್ಕಾರದ ಗಮನಸೆಳೆದಿದೆ.

ಪುತ್ತೂರು ತಾಲೂಕಿನ ಬೆಟ್ಟಂಪಾಡಿ ಗ್ರಾಮದ ಚಂದ್ರಾವತಿ ಅವರು ನೀರಿನ ನಿರ್ವಹಣೆಗಾಗಿ ಹಾಗೂ ಕೂಲಿ ಆಳುಗಳ ಸಮಸ್ಯೆಯಿಂದಾಗಿ ಬೇಸತ್ತಿದ್ದರು. ಬಳಿಕ ತೋಟಗಾರಿಕೆ ಇಲಾಖೆಯ ಅಧಿಕಾರಿಗಳನ್ನು ಸಂಪರ್ಕಿಸಿ ನೀರಾವರಿಯ ಬಗ್ಗೆ ವಿಚಾರಿಸಿದ್ದಾರೆ.

ರೈತರ ಆರ್ಥಿಕತೆಗೆ ಸಹಕಾರಿಯಾಗುವಂತೆ ಆಗಲು ತೋಟಗಾರಿಕೆ ಇಲಾಖೆಯು ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ಸೂಕ್ಷ್ಮ ನೀರಾವರಿ ಕಾರ್ಯಕ್ರಮವನ್ನು ಜಾರಿಗೆ ತಂದಿದೆ. ಈ ಯೋಜನೆಯಡಿ ರೈತರಿಗೆ 2 ಹೆಕ್ಟೇರ್ ಪ್ರದೇಶದವರೆಗೆ ಶೇ. 90 ರಷ್ಟು ಸಹಾಯಧನವನ್ನು ಇಲಾಖಾ ವತಿಯಿಂದ ನೀಡಲಾಗುತ್ತಿದೆ.

ಚಂದ್ರಾವತಿ ಅವರು ತೋಟಗಾರಿಕೆ ಇಲಾಖೆಯ ಮಾರ್ಗದರ್ಶನದಲ್ಲಿ ಸುಮಾರು 0.3 ಹೆಕ್ಟೇರ್ ಅಡಿಕೆ ಪ್ರದೇಶಕ್ಕೆ ಹನಿ ನೀರಾವರಿ ಅಳವಡಿಕೊಂಡಿದ್ದಾರೆ. ಇವರಿಗೆ ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ಸಹಾಯಧನವನ್ನೂ ಪಾವತಿಸಲಾಗಿದೆ.

ಯೋಜನೆ ಕೈ ಹಿಡಿದಿದ್ದು, ಚಂದ್ರಾವತಿ ಅವರು ಅಡಿಕೆ ಕೃಷಿಯಲ್ಲಿ ಹೊಸತನ ಕಂಡುಕೊಂಡಿದ್ದಾರೆ. ಅದಲ್ಲದೆ, ಅವರ ತೋಟವೂ ಈಗ ಅಚ್ಚುಕಟ್ಟಾಗಿದೆ. ಸಾಧ್ಯವಾದಷ್ಟು ಕಡಿಮೆ ಖರ್ಚು, ಮಿತನೀರು ಬಳಕೆ, ಬೆಳೆ ನಿರ್ವಹಣೆ ಮತ್ತು ಅಧಿಕ ಆದಾಯ. ಇದೇ ರೈತನ ದೃಷ್ಠಿಕೋನ ಅಲ್ಲವೇ’ ಎನ್ನುತ್ತಾರೆ ಚಂದ್ರಾವತಿ ಅವರು.

ಹನಿ ನೀರಾವರಿಯಲ್ಲಿ ಪ್ರತೀ ದಿನವೂ ಬೆಳೆಗೆ ಬೇಕಾದ ಪ್ರಮಾಣದಲ್ಲಿ ನೀರನ್ನು ಕೊಡುವುದರಿಂದ ತೇವಾಂಶವು ಹೆಚ್ಚಿನ ಬಿಗಿತವಿಲ್ಲದೆ ಬೆಳೆಗೆ ಒಂದೇ ಸಮನೆ ದೊರೆಯುತ್ತದೆ. ಅದರಿಂದ ಯಾವುದೇ ಕಾಲದಲ್ಲಿ ನೀರಿನ ಕೊರತೆ ಇಲ್ಲ, ಕಳೆಯ ಸಮಸ್ಯೆಯೂ ಇಲ್ಲ, ಕೂಲಿ ವೆಚ್ಚದಲ್ಲಿ ಉಳಿತಾಯವಾಗಿದೆ ಎಂದು ಚಂದ್ರಾವತಿ ತಿಳಿಸಿದರು.

ಹೆಚ್ಚಿನ ಮಾಹಿತಿಗೆ ದ.ಕ. ಜಿಲ್ಲೆಯ ತೋಟಗಾರಿಕೆ ಮಾಹಿತಿ ಮತ್ತು ಸಲಹಾ ಕೇಂದ್ರದ ವಿಷಯತಜ್ಞ ರಿಶಲ್ ಡಿಸೋಜ – 8277806372 ಅವರನ್ನು ಸಂಪರ್ಕಿಸಬಹುದು ಎಂದು ಮಂಗಳೂರು ತೋಟಗಾರಿಕೆ ಇಲಾಖೆ ಉಪ ನಿರ್ದೇಶಕರ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ.